ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ,
ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ನಾಯಕತ್ವ ಎನ್ನುವುದು ಒಂದು ಸೇವೆ. ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವದ ಗುಣವನ್ನು ನಾವು ಬೆಳೆಸಿಕೊಂಡಾಗ ಒಂದು ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದು. ಶೈಕ್ಷಣಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವಂತಹ ಶಾಲಾ ಸಂಸತ್ತು ಮಕ್ಕಳಲ್ಲಿ ಉತ್ತಮ ನಾಯಕತ್ವ ಹಾಗೂ ರಾಜಕೀಯ ಗುಣವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಜೊತೆಗೆ ಮಾನಸಿಕ ಒತ್ತಡದ ನಿವಾರಣೆ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂದು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್, ಕಾರ್ಕಳ ಇದರ ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯವರಾದ ಶ್ರೀ ಪ್ರಸನ್ನ ಶೆಟ್ಟಿ ಜಾರ್ಕಳ ಇವರು ಹೇಳಿದರು.

ದಿನಾಂಕ 21-06-2025 ರಂದು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇದರ 2025-26 ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಹಾಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇದರ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್ ಇವರು ಮಾತನಾಡುತ್ತಾ ‘ಯೋಗ’ ಎನ್ನುವುದು ಸನಾತನ ಭಾರತದ ಸಂಸ್ಕೃತಿಯು ನಮಗೆ ಕೊಟ್ಟ ಬಹಳ ದೊಡ್ಡ ಕೊಡುಗೆ. ಇದರ ಹಿಂದೆ ನಮ್ಮಋಷಿಮುನಿಗಳ ನಿರಂತರ ಶ್ರಮ ಹಾಗೂ ತಪಸ್ಸಿನ ಫಲ ಅಡಗಿದೆ. ಪ್ರಪಂಚದ ಎಲ್ಲಾ ದೇಶಗಳು ಬಾಲ್ಯಾವಸ್ಥೆಯಲ್ಲಿರುವಾಗ ನಮ್ಮ ದೇಶ ಭಾರತವು ಐದು ಸಾವಿರ ವರುಷಗಳ ಸಾಂಸ್ಕೃತಿಕ ವೈಭವದಿಂದ ಮೆರೆಯುತ್ತಿತ್ತು, ಎಂದು ಹೇಳಿದರು.

ಸಂಸ್ಥೆಯ ಸಂಚಾಲಕರಾದ ಕೆ ವೆಂಕಟೇಶ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಮ್ಮ ದೇಶದ ರಾಜಾಂಗ ವ್ಯವಸ್ಥೆಯು ಬೆಳೆದು ಬಂದ ಇತಿಹಾಸದ ಹಿನ್ನೆಲೆಯನ್ನು ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಇವರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಸಾನ್ವಿ ಮೆಂಡನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಾಸ್ಟರ್ ಆರ್ಯನ್ ಇವರು ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ತಿನ ಸದಸ್ಯರ ಹೆಸರನ್ನು ವಾಚಿಸಿದರು. ಮಾಸ್ಟರ್ ಸಮರ್ಥ ನಾಯಕ ಇವರು ಧನ್ಯವಾದವಿತರು. ದೈಹಿಕ ಶಿಕ್ಷಣ ಶಿಕ್ಷಕರಾದ ನಿಶಾಂತ್ ಅಂಚನ್ ಇವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ನಾಯಕನಾಗಿ ಆಯ್ಕೆಯಾದ ಮಾಸ್ಟರ್ ನಮನ್ ಪಾಟಿಲ್ ಹಾಗೂ ನಾಯಕಿಯಾಗಿ ಆಯ್ಕೆಯಾದ ಕುಮಾರಿ ಶಾನ್ವಿ ಹೆಗ್ಡೆ ಮತ್ತು ಶಾಲಾ ಸಂಸತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಮಾಸ್ಟರ್ ಭುವನ್ ಮಾಲಾಜಿ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಂತರ ವಿಶ್ವ ಯೋಗ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಯೋಗದ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


















































