
ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಚಿವ ಸ್ಥಾನ ಸಿಗಲಿಲ್ಲ ಎಂಬುದಕ್ಕಿಂತ ವರಿಷ್ಠರು ನೀಡಿದ್ದ ಭರವಸೆ ಈಡೇರಿಸದಿರುವುದು ನೋವು ತಂದಿತ್ತು. ಇದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ತಿಳಿಸಿದ್ದಾರೆ.
ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿರುವುದು ಕ್ಷೇತ್ರದ ಜನರು. ಅವರೇ ನನಗೆ ಹೈಕಮಾಂಡ್. ಹೀಗಾಗಿ ಅವರ ಭಾವನೆಗಳಿಗೆ ಗೌರವ ನೀಡಿ ಶಾಸಕನಾಗಿ ಮುಂದುವರಿಯುತ್ತೇನೆ. ಇನ್ನು ಮುಂದೆ ಯಾವುದೇ ಹುದ್ದೆಗಾಗಿ ಯಾರ ಮನೆಗೂ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುಮಾರು 60 ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾಗ ಎಲ್ಲರಿಗೂ ಅವಕಾಶ ನೀಡುವುದು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿತ್ತು. ಆದರೆ, ನನಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುವಂತೆ ವರಿಷ್ಠರ ಗಮನಕ್ಕೆ ತಂದಿದ್ದೆ. ಸಚಿವರ ಪಟ್ಟಿಯ ಘೋಷಣೆಯ ಕೊನೆಯ ಕ್ಷಣದವರೆಗೂ ಅವಕಾಶ ನೀಡುವ ಭರವಸೆ ಇತ್ತು. ಆದರೆ ಅಂತಿಮವಾಗಿ ನನ್ನ ಹೆಸರು ಕೈಬಿಟ್ಟಿದ್ದರಿಂದ ರಾಜೀನಾಮೆ ನೀಡಿದ್ದೆ ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರು ನನ್ನ ನಿವಾಸಕ್ಕೆ ಬಂದು ಈ ಬಗ್ಗೆ ಮಾತನಾಡಿದ್ದಾರೆ. ನನ್ನನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಆದರೆ, ಆ ಕಾರಣವನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದರು.
ಮಠಾಧೀಶರು, ಸಾಹಿತಿಗಳು ಹಾಗೂ ಹಲವು ಶಾಸಕರು ರಾಜೀನಾಮೆ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳದಂತೆ ಸಲಹೆ ನೀಡಿದ್ದರು. ಕ್ಷೇತ್ರದ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂಬ ಕಾರಣಕ್ಕೆ ರಾಜೀನಾಮೆ ಹಿಂಪಡೆದುಕೊಂಡಿದ್ದೇನೆ ಎಂದು ಯಶವಂತರಾಯಗೌಡ ಪಾಟೀಲ ತಿಳಿಸಿದರು.
“ವೈಯಕ್ತಿಕ ವಿಚಾರಗಳಿಗಿಂತ ಪಕ್ಷ ದೊಡ್ಡದು. ಎಲ್ಲ ಸ್ಥಾನಮಾನಕ್ಕಿಂತ ನನ್ನ ಸುದೀರ್ಘ ರಾಜಕಾರಣಕ್ಕೆ ಅವಕಾಶ ಕೊಟ್ಟ ಕ್ಷೇತ್ರದ ಜನ ದೊಡ್ಡವರು. ಕಷ್ಟದ ದಿನಗಳಲ್ಲಿ ಕಾಂಗ್ರೆಸ್ ಕಟ್ಟಿದ ಕುಟುಂಬ ನಮ್ಮದು. ಮುಂದೆಯೂ ಕಾಂಗ್ರೆಸ್ನಲ್ಲೇ ಇರುತ್ತೇನೆ. ಮನಸ್ಸಿಗೆ ಬಂದಂತೆ ಪಕ್ಷನಿಷ್ಠೆ ಬದಲಾಯಿಸುವ ಜಾಯಮಾನ ನನ್ನದಲ್ಲ,” ಎಂದು ಹೇಳಿದ್ದಾರೆ.

























































