
ಮೂಡುಬಿದಿರೆ, ಜುಲೈ 30: ಶಿಕ್ಷಣವು ಕೇವಲ ಉದ್ಯೋಗ ಗಳಿಸುವ ಸಾಧನವಲ್ಲ; ಅದು ವ್ಯಕ್ತಿತ್ವವನ್ನು ರೂಪಿಸುವ, ಸಮಾಜವನ್ನು ಮುನ್ನಡೆಸುವ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವ ಶಕ್ತಿ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರು ಅಭಿಪ್ರಾಯಪಟ್ಟರು.
ಎಕ್ಸಲೆಂಟ್ ಸೈನ್ಸ್ ಆ್ಯಂಡ್ ಕಾಮರ್ಸ್ ಪಿಯು ಕಾಲೇಜಿನ 2026–27ನೇ ಸಾಲಿನ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಂಕಗಳ ಗಳಿಕೆಗೆ ಮಾತ್ರ ಸೀಮಿತವಾಗದೆ, ಸಮಯಪಾಲನೆ, ಪ್ರಾಮಾಣಿಕತೆ, ಶಿಸ್ತು, ನಾಯಕತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬದುಕಿನ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳಬೇಕು. ವ್ಯಾಪಾರ ಎಂದರೆ ಕೇವಲ ಲಾಭವಲ್ಲ; ವಿಶ್ವಾಸ, ನೈತಿಕತೆ ಮತ್ತು ಮಾನವೀಯತೆಯೂ ಅದರ ಜೀವಾಳವಾಗಿವೆ. ಇಂತಹ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲೇ ಬೆಳೆಸಿಕೊಂಡಾಗ ಮಾತ್ರ ಯಶಸ್ವಿ ಉದ್ಯಮಿಗಳಾಗಿಯೂ, ಆದರ್ಶ ನಾಗರಿಕರಾಗಿಯೂ ರೂಪುಗೊಳ್ಳಲು ಸಾಧ್ಯ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರೋಜಾ ಫುಡ್ ಇಂಡಸ್ಟ್ರೀಸ್ ಮತ್ತು ವರ್ಧಮಾನ ಫ್ಯಾಬ್ರಿಕೇಶನ್ ಮಾಲಕರಾದ ಪದ್ಮಪ್ರಸಾದ್ ಜೈನ್ ಮಾತನಾಡಿ ವಾಣಿಜ್ಯ ವಿಭಾಗಕ್ಕೂ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಅವಕಾಶ ಅವಕಾಶಗಳಿವೆ.ಪರಿಶ್ರಮ, ಆತ್ಮವಿಶ್ವಾಸ ಮತ್ತು ನವೋದ್ಯಮದ ಮೂಲಕ ಯಶಸ್ಸು ಸಾಧಿಸಿ ಎಂದು ಹಾರೈಸಿದರು
ಗೌರವ ಅತಿಥಿಯಾಗಿ ಪಾಲ್ಗೊಂಡ ಸಂಸ್ಥೆಯ ಹಳೆ ವಿದ್ಯಾರ್ಥಿ ನಾಗಲಕ್ಷ್ಮಿ ಕಾಫೀ ವರ್ಕ್ಸ್ ಆಂಡ್ ಟ್ರೇಡರ್ಸ್ ಮಾಲಕ ಅನೀಶ್ ಜೈನ್, ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡು, ಗುರಿ ಸ್ಪಷ್ಟವಾಗಿದ್ದರೆ ಯಶಸ್ಸು ಖಚಿತ . ಸೋಲು ಸಾವಲ್ಲ. ಬದ್ಧತೆಯುಳ್ಳ ಪ್ರಯತ್ನ , ಏಕ ನಿಷ್ಠೆ ನಿಮ್ಮನ್ನು ಎತ್ತರಕ್ಕೆ ಏರಿಸುತ್ತದೆ. ಎಕ್ಸಲೆಂಟ್ ಸಂಸ್ಥೆ ವಾಣಿಜ್ಯ ವಿಭಾಗ ವಿದ್ಯಾರ್ಥಿಗಳನ್ನು ಯಶಸ್ವಿ ಉದ್ಯಮಿಗಳನ್ನಾಗಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪುಷ್ಪರಾಜ್ ಅವರು ಉಪಸ್ಥಿತರಿದ್ದು, ವಾಣಿಜ್ಯ ಸಂಘವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಸರೋಜಾ ಫುಡ್ ಇಂಡಸ್ಟ್ರೀಸ್ ಮತ್ತು ವರ್ಧಮಾನ ಫ್ಯಾಬ್ರಿಕೇಶನ್ ಸಹ ಮಾಲಕರಾದ ಮಹಾವೀರ ಜೈನ್ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಣಿಜ್ಯ ಸಂಘದ ಅಧ್ಯಕ್ಷ ಚಿರಂತ್ ವಿ. ಕುಮಾರ್ , ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀರಕ್ಷಾ ಸ್ವಾಗತಿಸಿ ,ಕುಮಾರಿ ತನು ಕಾರ್ಯಕ್ರಮ ನಿರೂಪಿಸಿದರು






















































