
ಮಂಗಳೂರು: ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ರಾಜ್ಯಾದಾದ್ಯಂತ ಪ್ಲಾಸ್ಟಿಕ್ ಬಾವುಟಗಳ ಉತ್ಪಾದನೆ, ಮಾರಾಟವನ್ನು ನಿಷೇಧಿಸಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಕೆ ಮಾಡಬಾರದು. ರಾಷ್ಟ್ರಧ್ವಜದ ಪ್ರಾಮುಖ್ಯತೆಯನ್ನು ಅರಿತು ಗೌರವಪೂರ್ವಕವಾಗಿ ಧ್ವಜಾರೋಹಣ ಮಾಡಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಬೇಕು ಎಂದು ಸೂಚಿಸಿದ್ದಾರೆ.
ಖಾದಿ ಬಟ್ಟೆಯಿಂದ ಉತ್ಪಾದನೆಯಾಗುವ ರಾಷ್ಟ್ರ ಧ್ವಜದ ಬಳಕೆ ಮಾಡುವ ಬಗ್ಗೆ ವಿಶೇಷ ಒತ್ತು ನೀಡಲು ಹಾಗೂ ಭಾರತೀಯ ಧ್ವಜ ಸಂಹಿತೆಯಲ್ಲಿ ಯಾವುದೇ ಉಲ್ಲಂಘನೆ ಕಂಡು ಬಂದಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹೇಳಿದರು.ಆ.15 ರಂದು ದೇಶಾದ್ಯಂತ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಸ್ವಾತಂತ್ರ್ಯದ ಸಂಭ್ರಮವನ್ನು ಭಾರತೀಯ ಧ್ವಜ ಸಂಹಿತೆಯ ಪ್ರಕಾರ ಬಟ್ಟೆಯಿಂದ ಮಾಡಿದ ರಾಷ್ಟ್ರ ಧ್ವಜಗಳನ್ನು ಮಾತ್ರ ಕಡ್ಡಾಯವಾಗಿ ಬಳಸಬೇಕು. ರಾಷ್ಟ್ರ ಧ್ವಜಕ್ಕೆ ಅಪಮಾನ ಹಾಗೂ ಅಗೌರವ ತೋರದೆ ಧ್ವಜಾರೋಹಣವನ್ನು ಕೈಗೊಳ್ಳುವುದು. ಸೂರ್ಯೋದಯದ ಬಳಿಕ ಧ್ವಜಾರೋಹಣದ ಬಳಿಕ ಸಂಜೆ ಸೂರ್ಯಾಸ್ತವಾದ ಸಂದರ್ಭ ಧ್ವಜವನ್ನು ಧ್ವಜಸ್ಥಂಭದಿಂದ ಇಳಿಸಬೇಕು. ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ದ್ವಜಸ್ಥಂಭದಲ್ಲಿ ರಾಷ್ಟ್ರ ಧ್ವಜ ಹಾರಾಡಬಾರದು ಎಂದು ಪ್ರಕಟನೆಯ ಮೂಲಕ ಸೂಚನೆ ನೀಡಿದ್ದಾರೆ.













