
ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರಾಜ್ಯ ಸರ್ಕಾರದ ಅಧಿಕಾರಿ ಅಥವಾ ನೌಕರರು ಮುಂಬಡ್ತಿ ಹೊಂದಲು ಅಗತ್ಯ ವೃತ್ತಿ ಕೌಶಲ್ಯ ತರಬೇತಿ ಕಡ್ಡಾಯಗೊಳಿಸಲು ಹಾಗೂ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ಸಿ/ಎಸ್ಟಿ ವರ್ಗದ ವ್ಯಕ್ತಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಅಥವಾ ಗ್ರೂಪ್ ಡಿ ವೃಂದದ ಸರ್ಕಾರಿ ಉದ್ಯೋಗ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ದೌರ್ಜನ್ಯಕ್ಕೊಳಗಾದ 87 ಪ್ರಕರಣಗಳನ್ನು ಅನುಕಂಪದ ಆಧಾರದ ಮೇಲೆ ವಿಶೇಷ ಪ್ರಕರಣಗಳೆಂದು ಒಂದು ಬಾರಿಗೆ ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿದ್ದು ಆದರೆ ಇಂತಹ ಪ್ರಕರಣಗಳಿಗೆ ನ್ಯಾಯ ಒದಗಿಸಲು ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರಿತ ನೇಮಕಾತಿ ವಿಶೇಷ ತಿದ್ದುಪಡಿ ನಿಯಮ-2022ರ ನಿಯಮ 4(1)ಕ್ಕೆ ತಿದ್ದುಪಡಿ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಿರ್ದೇಶನ ನೀಡಲು ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
ಇದಲ್ಲದೆ ನೌಕರರು ಹಾಗೂ ಅಧಿಕಾರಿಗಳು ಮುಂಬಡ್ತಿ ಹೊಂದಲು ಹುದ್ದೆಗೆ ಅಗತ್ಯವಾದ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಿಗೆ ಕಂಪ್ಯೂಟರ್, ತಂತ್ರಾಂಶ, ಸಾಫ್ಟ್ ಸ್ಕಿಲ್ಸ್ ಸೇರಿ ಹಲವು ತರಬೇತಿ ಅಗತ್ಯವಿದ್ದು ಈ ತರಬೇತಿ ಪಡೆಯದಿದ್ದರೆ ಮುಂಬಡ್ತಿಗೆ ಅವಕಾಶವಿಲ್ಲ ಎಂದು ಸಂಪುಟ ತಿಳಿಸಿದೆ.








