
ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಪರಿಷ್ಕರಿಸಿ ಶೇ.1.50ರಷ್ಟು ಹೆಚ್ಚಿಸಿ ಈ ಆದೇಶ 2025ರ ಜ.1ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಹೊರಡಿಸಿದೆ.
ಇದರಿಂದ ಹಾಲಿ 10.75ರಷ್ಟಿದ್ದ ತುಟ್ಟಿಭತ್ಯೆ ಶೇ.12.25ಕ್ಕೆ ಏರಿಕೆಯಾಗಿದ್ದು ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು ಸೇರಿ ಲಕ್ಷಾಂತರ ನಿವೃತ್ತ ನೌಕರರಿಗೂ ಅನುಕೂಲವಾಗಲಿದೆ.
ಇದು ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನನಾದರರು/ಕುಟುಂಬ ನಿವೃತ್ತಿ ವೇತನದಾರು, ಯುಇಸಿ/ಎಐಸಿಇಟಿ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಹಾಗೂ ಸರ್ಕಾರದ ಮತ್ತು ಜಿಲ್ಲಾ ಪಂಚಾಯಿತಿಗಳ ಪೂರ್ವಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಮತ್ತು ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರಿಗೂ ಇದು ಅನ್ವಯವಾಗಲಿದೆ.
ತುಟ್ಟಿ ಭತ್ಯೆಯನ್ನು(ಡಿಎ) ಸರ್ಕಾರಿ ನೌಕರರ ಮೂಲವೇತನದ ಶೇಕಡವಾರು ಪ್ರಮಾಣ ಬಳಸಿಕೊಂಡು ನಿರ್ಧರಿಸಲಾಗುತ್ತದೆ. ಇದು ಜೀವನ ವೆಚ್ಚಕ್ಕೆ ನೇರವಾಗಿ ಸಂಬಂಧಿಸಿದರಿಂದ ಡಿಎ ಅಂಶ ವಿಭಿನ್ನ ಉದ್ಯೋಗಿಗಳಿಗೆ ಅವರ ಸ್ಥಳ ಆಧರಿಸಿ ವಿಭಿನ್ನವಾಗಿರುತ್ತದೆ.



















