
ಧರ್ಮಸ್ಥಳ: ಫೇಸ್ಬುಕ್ ಮುಖಪುಟದ ಹೆಸರಾಂತ ಸಾಹಿತ್ಯ ಬಳಗಗಳಲ್ಲಿ ಒಂದಾದ ಯುಗಾದಿ ಬಳಗದ ಸ್ನೇಹ ಪರ್ವ ಕಾರ್ಯಕ್ರಮ
ಅಕ್ಟೋಬರ್ 20 ರ ಭಾನುವಾರದಂದು ಧರ್ಮಸ್ಥಳದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳದ ಶ್ಯಾಮಲಾ ಗೋಪಿನಾಥ್ ವಹಿಸಿಕೊಂಡಿದ್ದು, ಉದ್ಘಾಟನೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ವಿಜಯಕುಮಾರ್ ಜೈನ್, ಅಳದಂಗಡಿ ಅವರು ನೆರವೇರಿಸಿದ್ದರು. ಮುಖ್ಯ ಅತಿಥಿಗಳಾಗಿ ಪುಣೆಯ ಶರಣಬಸಪ್ಪ ಕುಂಬಾರ್, ಬೆಂಗಳೂರಿನ ಕಲಾವತಿ ಪ್ರಕಾಶ್ ಹಾಗೂ ಅರಸೀಕೆರೆಯ ಹೆಚ್. ಡಿ ದಿವಾಕರ್ ಅವರು ಆಗಮಿಸಿದ್ದರು. ಬೆಂಗಳೂರಿನ ಪಿ. ಎಸ್ ಭಟ್ ಹಾಗೂ ಧರ್ಮಸ್ಥಳ ಬಿ. ಭುಜಬಲಿಯವರ ಗೌರವ ಉಪಸ್ಥಿತಿಯಲ್ಲಿ ಹಾಗೂ ಯುಗಾದಿ ಬಳಗದ ಸಂಸ್ಥಾಪಕರಾದ ಶ್ರೀನಾಗ್. ಪಿ. ಎಸ್ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಬಳಗದ ಮೂವರು ವ್ಯವಸ್ಥಾಪಕಿಯರ ಕೃತಿ ಬಿಡುಗಡೆ ನಡೆಯಿತು.
ಕಾಸರಗೋಡಿನ ಸೌಮ್ಯ ಗುರು ಕಾರ್ಲೆಯವರ ಹೇಮಾಕ್ಷರಿ, ಬೆಂಗಳೂರಿನ ಶ್ರೀಲತಾ ಭಾರ್ಗವ್ ಅವರ ಸೇವಂತಿಗೆ ಹಾಗೂ ತುಮಕೂರಿನ ಮೀನಾ ನಾಗರಾಜ್ ಅವರ ಭಾವದಿಂಚರ ಕೃತಿಗಳು ಲೋಕಾರ್ಪಣೆಗೊಂಡವು.
ಕೊಡಗಿನ ವೀಣಾ ಉಮೇಶ್ ಪ್ರಾರ್ಥನೆ ಹಾಡಿದರು. ಬೆಂಗಳೂರಿನ ಸುಜಾತಾ ಭಟ್ ಸ್ವಾಗತಿಸಿದರು. ಹೊನ್ನಾವರದ ಶ್ರೀನಾಗ್ ಪಿ. ಎಸ್ ಪ್ರಸ್ತಾವಿಕ ಭಾಷಣ ಮಾಡಿದರು.
ಬೆಳ್ತಂಗಡಿಯ ಆಶಾ ಅಡೂರ್, ಶ್ರೀಲತಾ ಭಾರ್ಗವ್ ಹಾಗೂ ಬೆಂಗಳೂರಿನ ದರ್ಶಿನಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಮೀನಾ ನಾಗರಾಜ್ ವಂದಿಸಿದರು.
ಕಾರ್ಯಕ್ರಮದ ನಿಮಿತ್ತ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಮುಂಬೈ, ಪುಣೆಯಿಂದ 21 ಕವಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಯುಗಾದಿ ಬಳಗದ ಸದಸ್ಯರು ಆಗಮಿಸಿ ಸ್ನೇಹಪರ್ವ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.














