
ಉಪ್ಪಿನಂಗಡಿ: ಆದಿತ್ಯವಾರ ರಾತ್ರಿ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಎಂಬಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ಮೂಲದ ಕುಟುಂಬದ 14ರ ಹರೆಯದ ಬಾಲಕಿ ನೀಲಮ್ ಕುಮಾರ್ ತಾಯಿ ತನ್ನ ಮೊಬೈಲ್ ಕಸಿದುಕೊಂಡರೆಂದು ಕೋಪದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜಾರ್ಖಂಡ್ ನ ಸರ್ಜು ಬುಯ್ಯಾನ್ ಪತ್ನಿ, ಮಗಳೊಂದಿಗೆ ವಾರದ ಹಿಂದೆ ಕರಾಯ ಗ್ರಾಮದ ಕೊಂಬೆಟ್ಟಿ ಮಾರು ಜಗದೀಶ್ ಸರಳಾಯ ಅವರ ತೋಟದ ಕೆಲಸಕ್ಕೆ ಆಗಮಿಸಿದ್ದರು. ಭಾನುವಾರ ರಾತ್ರಿ 7.30ರ ಸುಮಾರಿಗೆ ತೋಟದ ಮಾಲಕರು ಒದಗಿಸಿದ ವಾಸ್ತವ್ಯದ ಕೋಣೆಯಲ್ಲಿ ನೀಲಮ್ ಕುಮಾರಿಯು ಮೊಬೈಲ್ನಲ್ಲಿ ಸಂಬಂಧಿಕರೊಂದಿಗೆ ವೀಡಿಯೋ ಕರೆ ಮಾಡುತ್ತಿದ್ದುದ್ದನ್ನು ತಾಯಿ ಆಕ್ಷೇಪಿಸಿ ಮೊಬೈಲ್ ಕಿತ್ತುಕೊಂಡಿದ್ದರೆನ್ನಲಾಗಿದೆ. ಕೋಪಿಸಿಕೊಂಡ ಬಾಲಕಿಯು ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ ಎಂದು ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.













