ಭಾಗ – 566
ಭರತೇಶ ಶೆಟ್ಟಿ,ಎಕ್ಕಾರು

ಉತ್ಸಾಹದಿಂದ ಆದಿಶೇಷ ಮತ್ತು ಬಬ್ರುವಾಹನ ಮಣಿಪುರದ ರಣಭೂಮಿಯತ್ತ ಸಾಗಿ ಅರ್ಜುನನ ಬಳಿಗೆ ಹೋಗುತ್ತಿದ್ದಾರೆ. ನಾಗ ಧೃತರಾಷ್ಟ್ರನಿಗೆ ಈ ವಿದ್ಯಮಾನ ಕಂಡು ತಡೆಯಲಾಗದಷ್ಟು ಅಪಮಾನ, ಪ್ರತಿಕಾರಗಳು ತನ್ನ ಮನದಲ್ಲಿ ಭೀಕರ ಅಲೆಗಳಂತೆ ಅಪ್ಪಳಿಸತೊಡಗಿವೆ. ಬಹುವಾಗಿ ದುಃಖಪಟ್ಟು, ಆ ಅರ್ಜುನ ಬದುಕುತ್ತಾನೆ, ಮಣಿಯನ್ನು ಪಡೆಯುವಲ್ಲಿ ಆತನಿಗೆ ಜಯವಾಗಿ ಹೋಯಿತು, ಉಲೂಪಿ ಅರ್ಜುನ ಮತ್ತೆ ಸಂಭ್ರಮಿಸುತ್ತಾರೆ! ನಾನು ಮಾಡಿದ ತಂತ್ರ, ಒಡ್ಡಿದ ವಿಘ್ನಗಳೆಲ್ಲ ಎಷ್ಟು ಸುಲಭದಲ್ಲಿ ಪರಿಹರಿಸಲ್ಪಟ್ಟಿತು. ಈಗ ಏನು ಮಾಡಲಿ ಎಂದು ಚಿಂತೆ ಮಾಡುತ್ತಾ ಕುಳಿತನು. ಅಷ್ಟರಲ್ಲಿ ಕೊರಗುತ್ತಿದ್ದ ಧೃತರಾಷ್ಟ್ರನ ಬಳಿಗೆ ಅವನ ಇಬ್ಬರು ಮಕ್ಕಳು ಬಂದು ಜೊತೆಯಾದರು. ಅಪ್ಪನಂತೆಯೇ ದುರ್ಬುದ್ಧಿ ದುಸ್ವಭಾವದ ಗುಣವನ್ನೇ ಹೊಂದಿದ್ದ ಇಬ್ಬರು ಮಕ್ಕಳು ತಮ್ಮ ಅಪ್ಪನ ದುಃಖಕ್ಕೆ ಸಮಾಧಾನ, ಧೈರ್ಯ ಹೇಳತೊಡಗಿದರು. ಅಪ್ಪಾ ಚಿಂತಿಸದಿರು. ನಿನಗೆ ಸಂತೋಷವಾಗುವಂತೆ, ಆ ಅರ್ಜುನ ಬದುಕದಂತೆ ನಾವು ಮಾಡುತ್ತೇವೆ. ಎಂದರು. ನಾಗ ಧೃತರಾಷ್ಟ್ರ “ಏನು ತಮಾಷೆಯ ವಿಚಾರವೇ? ನಾನು ಶತ ಪ್ರಯತ್ನ ಮಾಡಿ ಏನೇನೋ ಅಘಟಿತ ಘಟನೆಗಳಿಗೆ ಕಾರಣನಾದೆ, ಬಹುಪಾಲು ನಾಗ ಸೇನೆಯ ನಾಶವೂ ಆಯಿತು. ಈಗ ಸಂಜೀವಕ ಮಣಿಯನ್ನು ಅರ್ಜುನನ ಬಳಿ ಆದಿಶೇಷನೇ ಒಯ್ಯುತ್ತಿದ್ದಾನೆ. ನನಗೆ ಈ ಅಪಮಾನ ಸಹಿಸಲಾಗುತ್ತಿಲ್ಲ. ನನ್ನಿಂದಾಗದ ಕಾರ್ಯ ನೀವು ಮಾಡಬಲ್ಲಿರಾ? ” ಎಂದು ನಂಬಿಕೆ ಕಳಕೊಂಡು ಒದ್ದಾಡತೊಡಗಿದನು.
“ಅಪ್ಪಾ ಕೆಲವೊಮ್ಮೆ ಬಹಳ ಪ್ರಯಾಸದ ಕೆಲಸ ಮಾಡಿದರೂ ಕಾರ್ಯ ಸಾಧನೆಯಾಗದು. ಆದರೆ ತುಂಬಾ ಸರಳವೂ, ನಿರಾಯಾಸವೂ ಆದ ಚಿಕ್ಕ ಕೆಲಸದಿಂದ ನಾವು ಇಚ್ಚಿಸಿದ ಕಾರ್ಯ ಸಾಧನೆ ಆಗುತ್ತದೆ. ನೋಡುತ್ತಿರು ನಾವೇನು ಮಾಡುತ್ತೇವೆ ಎಂದು” ಹೀಗೆ ಹೇಳಿ ಅವರಿಬ್ಬರೂ ಅಲ್ಲಿಂದ ಹೊರಟೇ ಬಿಟ್ಟರು.
ಆದಿಶೇಷನೂ ಬಬ್ರುವಾಹನನು ಬಂದು ರಣಭೂಮಿ ತಲುಪುವ ಮೊದಲೇ ಅವರಿಬ್ಬರೂ ಬಂದು ಅರ್ಜುನನ ಶಿರಸ್ಸನ್ನು ಕಾಯುತ್ತಿದ್ದ ಚಿತ್ರಾಂಗದೆ – ಉಲೂಪಿಗೆ ತಿಳಿಯದಂತೆ ಅಪಹರಿಸಿಯೇ ಬಿಟ್ಟರು. ಅರೆಕ್ಷಣವೂ ಅಲ್ಲಿ ನಿಲ್ಲದೆ ಶಿರಸ್ಸನ್ನು ಎತ್ತಿಕೊಂಡು ಹಾರಿ ಹೋದರು. ಶಿರಸ್ಸನ್ನು ಹಿಡಿದು ಸಾಗುತ್ತಾ ಮಹಾಘೋರ ನಿರ್ಜನ ಅರಣ್ಯ ಪ್ರದೇಶದತ್ತ ಬಂದರು. ಸೂಕ್ತ ಸ್ಥಳವೆಂದು ತರ್ಕಿಸಿ ಅರ್ಜುನನ ರುಂಡವನ್ನು ಎತ್ತಿ ಆ ಘೋರ ಕಾಡಿನೊಳಗೆ ಬಿಸಾಡಿದರು.
ಇತ್ತ ಸಂತೋಷದಿಂದ ಶೇಷನನ್ನು ಮುಂದಿಟ್ಟುಕೊಂಡು ಮಣಿಸಹಿತ ರಣ ಭೂಮಿಗೆ ಶೂರ ಬಬ್ರುವಾಹನನು ಬಂದಿದ್ದಾನೆ. ಉಲೂಪಿ ಚಿತ್ರಾಂಗದೆ ಆದರದಿಂದ ಶೇಷನಿಗೆ ಕೈ ಮುಗಿದರು. ಮಗನ ಸಾಧನೆಗೆ ಬಹಳ ಹೆಮ್ಮೆ ಆಗುತ್ತಿದೆ ತಾಯಂದಿರಿಗೆ. ಈಗ ತೀರಾ ಅಗತ್ಯವಾದ ಕೆಲಸ ಅರ್ಜುನನನ್ನು ಪುನಶ್ಚೇತನ ಗೊಳಿಸುವುದಲ್ಲವೇ? ಅದಕ್ಕಾಗಿ ರುಂಡ ಮುಂಡಗಳನ್ನು ಜೋಡಿಸಲೆಂದು ಹುಡುಕಿದರೆ ಪಾರ್ಥನ ರುಂಡವಿಲ್ಲ.
ಬಬ್ರುವಾಹನ ಹೌಹಾರಿದ… ಅರೆ! ಅರ್ಜುನನ ಶಿರಸ್ಸು ಎಲ್ಲಿ ಹೋಯಿತು? ಅಲ್ಲಿದ್ದವರೆಲ್ಲರೂ ಗೊಂದಲಕ್ಕೊಳಗಾಗಿದ್ದಾರೆ. ಹುಡುಕಿದರೂ ಕಾಣುತ್ತಿಲ್ಲ. ಈ ಕ್ಷಣದವರೆಗೂ ಇಲ್ಲೇ ಇತ್ತು ನಾನು ಈಗ ನೋಡಿದೆನಷ್ಟೇ ಎಂದು ಉಲೂಪಿ ಚಿತ್ರಾಂಗದೆಯರು ಪರಸ್ಪರ ನೆನಪಿಸಿಕೊಂಡರು. ಈಗ ಅರ್ಜುನನನ್ನು ಬದುಕಿಸಬೇಕಾದರೆ ರುಂಡ ಮುಂಡ ಜೋಡನೆಯಾಗಬೇಕಲ್ಲ! ಆದರೆ ರುಂಡವೇ ಕಾಣೆಯಾಗಿದೆ. ಹೊಸತೊಂದು ಸವಾಲು ಎದ್ದು ನಿಂತಿದೆ.


































