ಭಾಗ – 456
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೫೬ ಮಹಾಭಾರತ
ಕುರು ಚಕ್ರವರ್ತಿ ಇಂದ್ರನಿಗೆ ನಮಿಸಿ ಉತ್ತರಿಸ ತೊಡಗುತ್ತಾನೆ ” ಸ್ವಾಮಿ, ನಾನು ವಿಶಿಷ್ಟವಾದ ಒಂದು ಯಜ್ಞವನ್ನು ಮಾಡಬೇಕೆಂಬ ಮಹತ್ತರವಾದ ಆಶಯ ಹೊಂದಿದ್ದೇನೆ. ಹಾಗೆ ಯಾಗಕ್ಕೆ ಸರಿಯಾದ ಸ್ಥಳ ಬೇಕಲ್ಲವೆ?.. ಸರಸ್ವತಿ – ದೃಷದ್ವತಿ ಎಂಬ ಎರಡು ಪುಣ್ಯ ನದಿಗಳ ಮಧ್ಯೆ ವಿರಾಜಿಸುತ್ತಿದ್ದ ‘ವಿಶಸನ ಕ್ಷೇತ್ರ’ ಎಂಬ ಪುಣ್ಯ ಕ್ಷೇತ್ರ ಆಯ್ಕೆ ಮಾಡಿದ್ದೇನೆ. ಹಿಂದೆ ಪರಶುರಾಮರು ಕ್ಷತ್ರಿಯ ಸಂಹಾರ ಮಾಡಿ ಬಳಿಕ ಪಿತೃ ತರ್ಪಣವಿತ್ತ ಪುಣ್ಯ ಭೂಮಿಯೂ ಇದೇ ಸ್ಥಳವಾಗಿದೆ. ಇಂತಹ ದಿವ್ಯ ಸ್ಥಳದಲ್ಲಿ ತನ್ನ ಸಂಕಲ್ಪದ ಮಹಾ ಯಜ್ಞವನ್ನು ಮಾಡಿಸುವುದೆಂದು ತೀರ್ಮಾನಿಸಿದ್ದೇನೆ. ಸೂಕ್ತ ಭೂ ಶೋಧನೆಯಾದ ಬಳಿಕ ಶಿವನನ್ನು ಮೆಚ್ಚಿಸಿ ನಂದಿಯನ್ನೂ, ಯಮನನ್ನು ಮೆಚ್ಚಿಸಿ ಕೋಣನನ್ನೂ ಎರವಲಾಗಿ ಪಡೆದು ಜೀವ ದೇವರ ಸಂಬಂಧದ ಪ್ರಕೃತಿ ಶಕ್ತಿಯ ನೊಗ ಕಟ್ಟಿ ವಿಶಾಲವಾದ ಪ್ರದೇಶವನ್ನು ಉಳುಮೆ ಮಾಡಲು ಮುಂದಾಗಿದ್ದೇನೆ.” ಎಂದನು.
“ಅದು ಸರಿ, ಈ ಉಳುಮೆ ಮಾಡುವುದೂ ಒಂದು ಯಜ್ಞವೇ? ಈ ಉಳುಮೆಯ ಉದ್ದೇಶವೇನು?” ಎಂದು ಇಂದ್ರ ಮರು ಪ್ರಶ್ನಿಸಿದನು. “ಭಗವಾನ್! ಧರ್ಮವನ್ನು ಬಿತ್ತಿ ಬೆಳೆಸುವುದಕ್ಕಾಗಿ ಈ ಉಳುಮೆ. ಶತಕ್ರತವೇ! ಈ ಕ್ಷೇತ್ರದಲ್ಲಿ ಯಾರು ಅಸುನೀಗುತ್ತಾರೋ ಅವರು ಪಾಪರಹಿತರಾಗಿ ಪುಣ್ಯಲೋಕ ಸೇರುವಂತಾಗಬೇಕು. ಅಂತಹ ಮಹತ್ಸಾಧನೆ ಸಾಧ್ಯವಾಗಬೇಕೆಂದು ನನ್ನ ಈ ಉಳುಮೆ” ಎಂದು ಉತ್ತರಿಸಿದನು.
ಇದನ್ನು ಕೇಳಿದ ದೇವರಾಜ ಗಹಗಹಿಸಿ ನಗತೊಡಗಿದನು. “ಕೃತ ಕರ್ಮಗಳ ಫಲಗಳೇನಿದ್ದರೂ ಇಲ್ಲಿ ಜೀವನಾಂತ್ಯ ಗೊಳಿಸಿದರು ಎಂಬ ಏಕೈಕ ಕಾರಣಕ್ಕೆ ಪುಣ್ಯಲೋಕ ಪ್ರಾಪ್ತಿಯನ್ನು ನೀನು ಬಯಸುತ್ತಿರುವುದು ಕುಚೋದ್ಯದ ವಿಚಾರ. ನೀನು ಒಂದು ಬಾರಿ ವಿವೇಕಿಯಾಗಿ ವಿವೇಚಿಸಿ ನೋಡು.” ಎಂದು ಅಪಹಾಸ್ಯದ ರೀತಿಯಲ್ಲಿ ಕೇಳಿ ಹೊರಟು ಹೋದನು.
ಇಂದ್ರನು ಈ ರೀತಿ ಪ್ರಶ್ನಿಸಿ ಅಪಹಾಸ್ಯ ಮಾಡಿ ಹೋದರೂ ಕಿಂಚಿತ್ ವಿಚಲಿತನಾಗದೆ ಉಳುತ್ತಲೆ ಇದ್ದನು. ಪದೇ ಪದೇ ಬಂದು ಪ್ರಶ್ನಿಸಿದರೂ ಕುರುಚಕ್ರವರ್ತಿಯ ಉತ್ತರ ಅದೇ ಆಗಿತ್ತು.
ಕುರು ಚಕ್ರವರ್ತಿ ಉಗ್ರ ತಪಸ್ಸಿನಂತೆ ತನ್ಮಯನಾಗಿ ತನ್ನ ಕಾರ್ಯ ಮಾಡುತ್ತಾ ಇದ್ದನು. ದೇವೇಂದ್ರನಿಗೆ ಕುರು ಮಾಡುತ್ತಿರುವ ಈ ಕೃತ್ಯ ಗೊಂದಲ ಉತ್ಪತ್ತಿ ಮಾಡತೊಡಗಿತು. ದೇವಸಭೆ ನಡೆಸಿ ಕುರುವಿನ ಉದ್ದೇಶ ಮತ್ತು ಆತನ ಸಾಧನಾ ಪಥವನ್ನು ವಿವರಿಸಿದನು. ಕೇಳಿದ ದೇವತೆಗಳು “ದೇವೇಶಾ! ನಿನ್ನಿಂದ ಇದಕ್ಕೆ ಪರಿಹಾರ ಸಾಧ್ಯವಾಗುವುದಾದರೆ ರಾಜರ್ಷಿಯನ್ನು ಅನುಗ್ರಹಿಸು. ಆದರೆ ಮನುಷ್ಯರು ಯಜ್ಞಗಳ ಮೂಲಕವಾಗಿ ನಮ್ಮನ್ನು ತೃಪ್ತಿಪಡಿಸದೆ, ಸತ್ಕರ್ಮ ವಿರಚಿಸದೆ ಆ ಕ್ಷೇತ್ರದಲ್ಲಿ ಮರಣ ಹೊಂದಿದರು ಎಂಬ ಏಕೈಕ ಕಾರಣಕ್ಕೆ ಸ್ವರ್ಗ ಪ್ರಾಪ್ತಿಯಾಗುವುದಾದರೆ, ಇನ್ನು ಮುಂದೆ ಯಜ್ಞಗಳು ನಡೆಯಲಾರವು. ಯಜ್ಞದ ಹವಿರ್ಭಾಗಗಳು ನಮಗೆ ಸಿಗಲಾರವು. ಇದಕ್ಕೆ ದಾರಿಯನ್ನು ನೀನೇ ಕಂಡುಕೊಳ್ಳಬೇಕು” ಎಂದು ವಿಮರ್ಷೆ ಮಾಡಿದರು.
ದೇವತೆಗಳ ಸಲಹೆಯಂತೆ ಕುರುರಾಜನಲ್ಲಿಗೆ ಮತ್ತೊಮ್ಮೆ ಬಂದ ಇಂದ್ರ ” ಕುರುಶ್ರೇಷ್ಟನೇ! ನೀನಿನ್ನು ವೃಥಾ ಕಷ್ಟ ಪಡಬೇಡ. ನನ್ನ ಮಾತಿನಂತೆ ನಡೆದುಕೋ. ನಿನ್ನ ಅಪೇಕ್ಷೆಯಂತೆ ಇಲ್ಲಿ ಮರಣ ಹೊಂದಿದವರೆಲ್ಲ ಸ್ವರ್ಗವೇರಲು ಸಾಧ್ಯವಾಗದು. ಪ್ರಾಣ ಇರುವ ಯಾರೇ ಆಗಲಿ ಮನುಷ್ಯ ಯಾ ಪ್ರಾಣಿ ಪಕ್ಷಿಗಳಾದರೂ ಆಹಾರವನ್ನು ಬಿಟ್ಟು ಸ್ವಲ್ಪವೂ ಆಲಸ್ಯವಿಲ್ಲದೆ ಉಪವಾಸ ವೃತ ನಿಷ್ಠರಾಗಿ ಈ ಕ್ಷೇತ್ರದಲ್ಲಿ ಪ್ರಾಣ ಬಿಡುತ್ತಾರೋ, ಅಥವಾ ಈ ಕ್ಷೇತ್ರದಲ್ಲಿ ಯಾರು ಯುದ್ಧ ಮಾಡುತ್ತಾ ಪ್ರಾಣತ್ಯಾಗ ಮಾಡುತ್ತಾರೋ ಅವರೆಲ್ಲರೂ ಸ್ವರ್ಗಲೋಕದ ಸುಖಕ್ಕೆ ಭಾಗಿಗಳಾಗಲಿ” ಎಂದು ವರವಿತ್ತನು.
ನಾರದರು ಬಲರಾಮನಿಗೆ ಕ್ಷೇತ್ರ ಮಹಾತ್ಮೆ ಹೇಳುತ್ತಾ, “ಈ ಕ್ಷೇತ್ರದಲ್ಲಿ ಕಠಿಣ ಉಪವಾಸ ಅಥವಾ ಯುದ್ಧ ಮುಖೇನ ವೀರ ಮರಣವನ್ನಪ್ಪಿದವರೆಲ್ಲರೂ ಸ್ವರ್ಗ ಪ್ರಾಪ್ತಿ ಮಾಡುವ ವರ ಹೊಂದಿದ್ದಾರೆ. ಇದಿಷ್ಟು ಆದ ಬಳಿಕವೂ ಅಂದರೆ ಇಂದ್ರನಿಂದ ವರ ಪ್ರಾಪ್ತಿ ಆದರೂ ಕುರು ಚಕ್ರವರ್ತಿ ನಿಲ್ಲಿಸದೆ ಮತ್ತೂ ಉಳುಮೆ ಮುಂದುವರಿಸಿದನು.
ಇದನ್ನು ಗಮನಿಸಿದ ಭಗವಾನ್ ವಿಷ್ಣು ವೃದ್ದ ಬ್ರಾಹ್ಮಣ ರೂಪದಲ್ಲಿ ಕಾಣಿಸಿಕೊಂಡು ಇಂದ್ರನಂತೆಯೆ ಬಳಿ ಬಂದು ಕುರು ಚಕ್ರವರ್ತಿಯನ್ನು ಪ್ರಶ್ನಿಸಿದನು. ಆತ ಮೊದಲಿನ ಅದೇ ಉತ್ತರ ನೀಡುತ್ತಾನೆ. ಬ್ರಾಹ್ಮಣ ರೂಪಿ ವಿಷ್ಣು ಅಷ್ಟಕ್ಕೆ ಬಿಡದೆ “ಅಯ್ಯಾ ! ನೀನು ಉಳುಮೆಯಾದ ಈ ಕ್ಷೇತ್ರದಲ್ಲಿ ಧರ್ಮವನ್ನು ಹೇಗೆ ಬಿತ್ತುವೆ? ಬೆಳೆಸುವೆ?” ಎಂದು ಪ್ರಶ್ನಿಸಿದನು. ಆಗ ಇವರಿಬ್ಬರ ಮಧ್ಯೆ ಸುದೀರ್ಘ ಧರ್ಮ ಜಿಜ್ಞಾಸೆ ನಡೆಯತೊಡಗಿತು. ಕುರು ಚಕ್ರವರ್ತಿ ನೀಡಿದ ಸದುತ್ತರಗಳಿಂದ ಸಂತೃಪ್ತನಾದ ವಿಷ್ಣು ಪರಮಾತ್ಮ ಸುಪ್ರೀತನಾದನು. ಕುರು ಚಕ್ರವರ್ತಿಯ ಧರ್ಮ ಬುದ್ಧಿಗೆ ಮೆಚ್ಚಿ “ಅಯ್ಯಾ ಕುರುರಾಜಾ! ನಿನ್ನ ಇಚ್ಚೆಯಂತೆ ಉಳುವವನು ನೀನೇ ಆಗಿರು. ಬಿತ್ತುವವನು ನಾನಾಗುತ್ತೇನೆ. ಪರಿಸರ ಪ್ರಭಾವವು ಧರ್ಮವನ್ನು ಬೆಳೆಸಲಿ. ಶೃದ್ಧಾವಂತರು ಮತ್ತೂ ಧರ್ಮವನ್ನು ಬಿತ್ತಿ ಬೆಳೆಸುತ್ತಿರಲಿ” ಎಂದು ಅನುಗ್ರಹಿಸಿ ಅಂತರ್ಧಾನನಾದನು.
ಇದಾದ ಬಳಿಕವೂ ಅರಸನು ಉಳುತ್ತಲೆ ಇದ್ದನು. ಆದರೆ ಈಗ ಒಂದು ವ್ಯತ್ಯಾಸವಿತ್ತು. ಬಿತ್ತನೆ ಮಾಡಲು ಒಪ್ಪಿರುವ ಭಗವಾನ್ ವಿಷ್ಣುವಿನ ಸುದರ್ಶನ ಚಕ್ರ ಅರಸನ ಹಿಂದೆ ಹೋಗ ತೊಡಗಿತು. ಕುರು ರಾಜನ ಶರೀರದ ಅಂಗಾಂಗಗಳನ್ನು ಸೂಕ್ಷ್ಮ ಚೂರ್ಣರೂಪಕ್ಕೆ ಕತ್ತರಿಸ ತೊಡಗಿತು. ಉಳುಮೆಯಾದ ಪುಣ್ಯ ಭೂಮಿಯಲ್ಲಿ ಭಗವಾನ್ ವಿಷ್ಣುವಿನಿಂದ ಕುರು ಚಕ್ರವರ್ತಿಯ ದೇಹದ ಚೂರ್ಣದಂತಹ ಧೂಳು ಬಿತ್ತಲ್ಪಟ್ಟಿತು. ಕುರುಕ್ಷೇತ್ರದ ಮಣ್ಣ ಕಣ ಕಣದಲ್ಲೂ ಕುರುವಿನ ತನು ಧರ್ಮದ ಬೀಜವಾಗಿ ಶ್ರೀಹರಿಯಿಂದ ಬಿತ್ತಲ್ಪಟ್ಟಿತು. ಇಂತಹ ಈ ಪುಣ್ಯ ಭೂಮಿ ಧರ್ಮ ಸಂಸ್ಥಾಪನೆ ಮಾಡುವ ಕ್ಷೇತ್ರವಾಗಿ ಈಗ ಪರಮ ಪವಿತ್ರ ಕುರು ಕ್ಷೇತ್ರ ವಾಗಿ ಪ್ರಸಿದ್ದವಾಗಿದೆ. ಇಂದಿಗಾಗುವಾಗ ಪಾಂಡವ ಕೌರವರ ಮಧ್ಯೆ ಹದಿನೇಳು ದಿನಗಳ ಮಹಾಯುದ್ದ ಸಾಗಿ ಬಂದಿದೆ. ಅಲ್ಲಿ ಏನಾಗುತ್ತಿದೆ ಎಂಬ ಸತ್ಯ ತಿಳಿದಿದೆಯೇ ನಿನಗೆ?” ಎಂದು ನಾರದರು ಬಲರಾಮನನ್ನು ಪ್ರಶ್ನಿಸಿದರು.
ಮುಂದುವರಿಯುವುದು…






