ಭಾಗ – 341
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೪೧ ಮಹಾಭಾರತ
ಕೃಷ್ಣ ಪಾರ್ಥನ ರಥವನ್ನು ಭೀಷ್ಮಾಚಾರ್ಯರ ಸಮಕ್ಷ ತರುತ್ತಿದ್ದಂತೆ ಪಿತಾಮಹ ವಿಮುಖರಾಗಿ ಬೇರೆ ದಿಕ್ಕಿನತ್ತ ತಿರುಗಿ ಪಾಂಡವ ಸೇನೆಯ ನಾಶದಲ್ಲಿ ನಿರತರಾಗುತ್ತಿದ್ದರು. ಹೀಗೆ ದಿಕ್ಕು ತಪ್ಪಿಸುತ್ತಿದ್ದ ಭೀಷ್ಮಾಚಾರ್ಯರಿಗೆ ಅರ್ಜುನ ಪುತ್ರ ಅಭಿಮನ್ಯು ಎದುರಾದನು. ಭೀಷ್ಮಾಚಾರ್ಯರು ರಣ ಭಯಂಕರನಾಗಿ ಪಾಂಡವ ಸೇನೆಯ ಸರ್ವನಾಶಗೈಯುವುದನ್ನು ತಡೆಯಲು ಅಭಿಮನ್ಯು ಪಿತಾಮಹನಿಗೆ ಅಡ್ಡವಾಗಿ ನಿಂತನು. ಭೀಷ್ಮಾಚಾರ್ಯರನ್ನು ಅನುಸರಿಸಿ ರಥರಕ್ಷಕರಾಗಿ ಬರುತ್ತಿದ್ದ ಕೃಪಾಚಾರ್ಯ, ಶಲ್ಯ ಭೂಪತಿ ಮತ್ತು ಇತರ ಐವರು ಮಹಾರಥಿಗಳು ಅಡ್ಡಿಪಡಿಸುವ ಎದುರಾಳಿಗಳನ್ನು ಕಂಗೆಡಿಸಿ ಭೀಷ್ಮಾಚಾರ್ಯರಿಗೆ ದಾರಿ ಮಾಡಿ ಕೊಡುತ್ತಾ ಸಹಾಯಕರಾಗುತ್ತಿದ್ದರು. ಆದರೆ ಅಭಿಮನ್ಯು ಇಷ್ಟೂ ಮಂದಿ ಅಗ್ರಮಾನ್ಯ ವೀರರನ್ನು ಏಕಕಾಲದಲ್ಲಿ ಎದುರಿಸಿ ಬಾಣಗಳ ಮಳೆಗರೆದನು. ಉಗ್ರಹೋರಾಟದಲ್ಲಿ ಭೀಷ್ಮ ಸಹಿತ ರಥ ರಕ್ಷಕರೂ ಒಂದೊಮ್ಮೆಗೆ ವಿಚಲಿತರಾಗಿ ಹೋದರು. ರಥರಕ್ಷಕರನ್ನು ಘಾಸಿಗೊಳಿಸಿ ಹಿಂದೆ ಸರಿಯುವಂತೆ ಮಾಡಿ ಬಿಟ್ಟನು. ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಮರಿ ಸಿಂಹದಂತೆ, ಅರ್ಜುನ ಸುತ ಪ್ರತಿ ಅರ್ಜುನನಂತೆ ರಣದಲ್ಲಿ ಮೆರೆಯುತ್ತಾ ಭೀಷ್ಮಾಚಾರ್ಯರ ಸುವರ್ಣ ತಾಲ ಧ್ವಜದಂಡವನ್ನು ಕತ್ತರಿಸಿ ತನ್ನ ಪರಾಕ್ರಮ ಸಾಬೀತು ಪಡಿಸಿದನು. ಚಂದ್ರವಂಶದ ಕುಡಿ ಪಾರ್ಥ ಪುತ್ರನ ಶೌರ್ಯ ಸ್ಥೈರ್ಯ ವಿಕ್ರಮವನ್ನು ಕಂಡು ಕುರು ಸೇನಾಪತಿಯಾದ ಭೀಷ್ಮಾಚಾರ್ಯರು ಒಮ್ಮೆಗೆ ಮೈಮರೆತರು. ಇಂತಹ ಪುತ್ರ ರತ್ನ ನಮ್ಮ ವಂಶಕ್ಕೆ ಕೀರ್ತಿ ಕಲಶ ಸದೃಶ ಎಂದು ಅಭಿಮನ್ಯುವಿನ ಬಗ್ಗೆ ಅಭಿಮಾನ ತಾಳಿದರು. ತಕ್ಷಣ ಎಚ್ಚೆತ್ತು ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಅಭಿಮನ್ಯುವನ್ನು ಹಿಂದೆ ಸರಿಯುವಂತೆ ಮಾಡುವ ಯತ್ನ ಮಾಡಿದರೆ, ಅಂತಹ ಎಲ್ಲಾ ದಿವ್ಯಶರಗಳನ್ನೂ ಪ್ರತ್ಯಸ್ತ್ರಗಳಿಂದ ಖಂಡಿಸಿ, ಮರು ಅಸ್ತ್ರಗಳನ್ನು ಪ್ರಯೋಗಿಸಿ ಸವಾಲೆಸೆಯುತ್ತಿದ್ದನು. ಒಂದೆಡೆ ಭೀಷ್ಮಾಚಾರ್ಯರಿಗೆ ಪ್ರಪೌತ್ರನ (ಮೊಮ್ಮಗನ) ಯುದ್ದವೈಖರಿ ಮನ ಸೋಲಿಸುತ್ತಿದ್ದರೆ, ತನಗೆ ತಡೆಯಾಗಿ ನಿಂತು ಪ್ರತಿಬಂಧಿಸುತ್ತಿರುವ ಸಾಹಸ ಕೋಪಕ್ಕೂ ಕಾರಣವಾಗತೊಡಗಿತು. ಈ ಆಕ್ರೋಶದಿಂದ ಮಂತ್ರ ಪೂರಿತ ಶರಗಳನ್ನು ಸರಸರನೆ ಸೆಳೆಸೆಳೆದು ಪ್ರಯೋಗಿಸಿ ಅರೆಕ್ಷಣಕ್ಕೆ ಕಂಗೆಡಿಸಿದರು. ಕ್ಷಣಾರ್ಧದಲ್ಲಿ ವಾಯವ್ಯಾಸ್ತ್ರ ಪ್ರಯೋಗಿಸಿ ಅಭಿಮನ್ಯುವಿನ ಕಂದು ಕುದುರೆಗಳ ರಥವನ್ನು ಹಾರಿಸಿಯೆ ಬಿಟ್ಟರು. ಅಷ್ಟಾಗುತ್ತಲೆ ಪಾಂಡವ ಸೇನಾಪತಿ ದೃಷ್ಟದ್ಯುಮ್ನ ಅಭಿಮನ್ಯುವಿನ ರಕ್ಷಣೆಗೊದಗಿ ಬಂದು ಭೀಷ್ಮಾಚಾರ್ಯರನ್ನು ತಡೆದು ಹೋರಾಡತೊಡಗಿದನು. ಭೀಷ್ಮ ದೃಷ್ಟದ್ಯುಮ್ನರ ಮುಖಾಮುಖಿ ಯುದ್ದ ಸಾಗುತ್ತಿರುವುದನ್ನು ನೋಡಿದ ಕೃಷ್ಣ ಕೂಡಲೆ ಅರ್ಜುನನ ರಥವನ್ನು ಅತ್ತ ತಿರುಗಿಸಿ ಭೀಷ್ಮಾಚಾರ್ಯರಿಗೆ ಎದುರಾಳಿಯಾಗಿಸಿಬಿಟ್ಟನು. ಕೃಷ್ಣ ಅರ್ಜುನನ್ನು ಪ್ರೇರೆಪಿಸಿ ಹುರಿದುಂಬಿಸುತ್ತಾ ರಥಕಲ್ಪ ವಿದ್ಯೆಯ ಚಮತ್ಕೃತಿ ತೋರುತ್ತಾ ಅದ್ಬುತ ಯುದ್ದ ಸಾಗುವಂತೆ ಮಾಡಿದನು. ಜಗತ್ತೇ ಪ್ರಳಯವಾಗಬಹುದಾದ ಮಂತ್ರಾಸ್ತ್ರಗಳು ಪ್ರಯೋಗಿಸಲ್ಪಟ್ಟು ಪರಸ್ಪರ ನಿಗ್ರಹಿಸಲ್ಪಡುತ್ತಿವೆ. ಅರ್ಜುನ ಮಾತ್ರ ಕೃಷ್ಣ ಉಪದೇಶಿಸಿ ಎಚ್ಚರಿಸಿದ್ದರೂ ಬದಲಾಗದೆ ಈಗಲೂ ಪಿತಾಮಹನ ಮೇಲೆ ಮಮಕಾರ ತೋರುತ್ತಿರುವುದು ಕೃಷ್ಣನಿಗೆ ಅರ್ಥವಾಯಿತು. ಪಿತಾಮಹ ತನ್ನ ರಥಕ್ಕೆ ತಡೆಯಾಗಿರುವ ಮೊಮ್ಮಗ ಪಾರ್ಥನನ್ನು ತೊಲಗಿಸಲು ಒಂದರ ಹಿಂದೆ ಒಂದು ಮಂತ್ರಾಸ್ತ್ರ – ದಿವ್ಯಶರಗಳನ್ನು ಪ್ರಯೋಗಿಸುತ್ತಿದ್ದರೆ, ಅರ್ಜುನ ಮಾತ್ರ ಶಾಂತ ಚಿತ್ತನಾಗಿ ಅವರಿಂದ ಎಸೆಯಲ್ಪಡುತ್ತಿದ್ದ ದಿವ್ಯಾಸ್ತ್ರಗಳನ್ನು ಖಂಡಿಸುತ್ತಿದ್ದಾನಷ್ಟೆ ಹೊರತು ತಾನು ಉಗ್ರನಾಗೆರಗಿ ಪ್ರತಿದಾಳಿ ಮಾಡುತ್ತಿಲ್ಲ. ಅರ್ಜುನನ ಈ ಮನೋಸ್ಥಿತಿ ಕೃಷ್ಣನಿಗೆ ಮತ್ತೆ ಅರ್ಥವಾಗಿ ಆತನ ಮರುಳು ಬುದ್ದಿಗೆ ಕಿರುನಗೆ ಮೂಡಿತು. ಭೀಷ್ಮಾಚಾರ್ಯರಿಗೆ ರೋಷ ಆಕ್ರೋಶ ಏರುತ್ತಲೆ ಇದೆ. ಅರ್ಜುನ ಪ್ರಶಾಂತವಾಗಿದ್ದಾನೆ, ಕೃಷ್ಣ ಮುಗುಳ್ನಗುತ್ತಿದ್ದಾನೆ. ನನ್ನ ದಿವ್ಯಾಸ್ತ್ರಗಳು ಈ ರೀತಿ ಉಪಶಮನಗೊಳ್ಳುವಲ್ಲಿ ಮಾಧವನ ಮಹಿಮೆಯೆ ಕೆಲಸಮಾಡುತ್ತಿದೆ ಎಂಬ ರೀತಿ ಭಾಸವಾಯಿತು. ಆ ರೀತಿ ಮನಸ್ಸು ತರ್ಕಿಸಿದೊಡನೆ ತನ್ನ ಗುರು ಭಾರ್ಗವರಾಮರನ್ನು ಸ್ಮರಿಸಿ ಅವರಿಂದ ಪ್ರಸಾದಿತವಾದ “ಅಸಿರತ್ನ” ವೆಂಬ ವಿಶೇಷ ಮಹಾಶರವನ್ನು ಸಂಧಾನಮಾಡಿ ಮಂತ್ರಪೂರಿತಗೊಳಿಸಿ ಪಾರ್ಥಸಾರಥಿಯ ಹಣೆಯನ್ನು ಗುರಿಯಾಗಿಸಿ ಪ್ರಯೋಗಿಸಿದರು. ಗಾಂಗೇಯನ ಗುರಿ ತಪ್ಪುವುದುಂಟೆ? ನವಿಲುಗರಿಯ ಮುಕುಟ ಧರಿಸಿದ ಜಗನ್ನಾಟಕ ನಿರ್ದೇಶಕನ ಲಲಾಟಕ್ಕೆ ಟಪ್ಪನೆ ಸಿಡಿದು ಬಂದು ಚುಚ್ಚಿತು. ಹಣೆಯೊಡೆದು ಸರ್ರನೆ ರಕ್ತ ಕಾರಂಜಿಯಂತೆ ಚಿಮ್ಮಿತು. ಉರಿ ಉರಿ.. ಶ್ರೀ ಹರಿಗೆ ಉಪಶಮಿಸಲಾಗದ ಉರಿ. ಕೋಪ ಏರಿ, ಕಂಗಳು ಶರಘಾತದಿಂದ ಇಳಿಯುತ್ತಿದ್ದ ರಕ್ತ ತುಂಬಿಯೋ ಏನೊ! ಪ್ರಜ್ವಲಿಸುವ ಕೆಂಡದಂತೆ ಕೆಂಪಡರಿ ಕಿಡಿಕಾರತೊಡಗಿದವು. ಪಾರ್ಥನ ರಥದ ಕುದುರೆಗಳ ವಾಘೆಗಳನ್ನು ಬಿಸುಟು ಸಾರಥ್ಯ ಪೀಠದಿಂದ ಹಾರಿ ಕೆಳಗಿಳಿದನು. ಬಲಗೈ ಎತ್ತಿ ಸುದರ್ಶನ ಚಕ್ರಧರನಾಗಿ, ಘರ್ಜಿಸಿ ಆರ್ಭಟಿಸುತ್ತಾ ಈ ಕೂಡಲೆ ಭೀಷನನ್ನು ಕೊಂದು ಮುಗಿಸುವೆನೆಂದು ಅಬ್ಬರಿಸುತ್ತಾ ಮುನ್ನುಗ್ಗಿದನು. ಅರ್ಜುನನು ತನ್ನ ಗಾಂಡೀವ ಕೆಳಗಿಳಿಸಿ, ಕೆಳಗಿರಿಸಿ ತಾನೂ ರಥದಿಂದ ಹಾರಿ ಹರಿಯನ್ನು ಹಿಂಬಾಲಿಸಿ ಪಾದಕ್ಕೆರಗಿದನು. “ಕೃಷ್ಣಾ! ಶಾಂತನಾಗು, ದುಡುಕಬೇಡ. ಅಜ್ಜ ಭೀಷ್ಮನನ್ನು ನಾನು ಎದುರಿಸಿ ಹಿಮ್ಮೆಟ್ಟಿಸುವೆ. ಕೃಪೆದೋರಿ ಎನಗವಕಾಶ ನೀಡು ಎಂದು ಬೇಡತೊಡಗಿದನು. ಶ್ರೀ ಕೃಷ್ಣ ಪರಮಾತ್ಮನಿಗೆ ಪಾರ್ಥನ ಪ್ರಾರ್ಥನೆ ಕೇಳಿಸಲಿಲ್ಲ ಎಂಬಂತೆ ಮುಂದುವರಿದನು….
ಮುಂದುವರಿಯುವುದು…






















































