ಭಾಗ – 331
ಭರತೇಶ್ ಶೆಟ್ಟಿ, ಎಕ್ಕಾರ್

ವಾಸುದೇವ ಶ್ರೀ ಕೃಷ್ಣನು ಮುಗುಳ್ನಗುತ್ತಾ “ಪಾರ್ಥಾ! ಬಹಳ ಗಹನವಾದ ತರ್ಕವನ್ನು ಮುಂದಿರಿಸಿರುವೆ. ಈಗಾಗಲೆ ನಿನಗೆ ಆತ್ಮ ಮತ್ತು ಶರೀರದ ಬಗ್ಗೆ ತಿಳಿಸಿರುವೆ. ಆತ್ಮನು ತಾನು ಹೊಂದಿದ್ದ ಶರೀರವನ್ನು ತೊರೆದು ಹೋಗುವುದು ಸಾವು, ಮತ್ತೊಂದು ಶರೀರ ಹೊಂದುವುದು ಹುಟ್ಟು ಎನ್ನಲಾಗುತ್ತದೆ. ಶರೀರಧಾರಿಯಾದ ಆತ್ಮನು ಒಂದಲ್ಲ ಒಂದು ರೀತಿಯ ಕರ್ಮವನ್ನು ಮಾಡುತ್ತಲೆ ಇರುತ್ತಾನೆ. ಪರಿಣಾಮವಾಗಿ ಆ ಕರ್ಮಗಳಿಗೆ ತಕ್ಕಂತಹ ಪ್ರತಿಫಲವಾಗಿ ಪ್ರಾಪ್ತವಾಗುತ್ತದೆ. ಅಂತಹ ಉತ್ತಮ ಮತ್ತು ಕೆಟ್ಟ ಫಲಗಳನ್ನು ಶರೀರಾಂತರ್ಗತ ಆತ್ಮನು ಅನುಭವಿಸಬೇಕು. ಆದರೆ ಆತ್ಮನಿಗೆ ತಾನು ಹೊಂದಿರುವ ಶರೀರದಿಂದ ಈ ಫಲಾಫಲಗಳನ್ನು ಅನುಭವಿಸಲಾಗದೆ ಹೋದಾಗ ಮತ್ತೊಂದು ದೇಹದ ಮೂಲಕ ಹುಟ್ಟಿ ಅಂತಹ ಬಾಕಿ ಉಳಿದಿರುವ ಫಲವನ್ನು ಅನುಭವಿಸುವಂತಾಗುತ್ತದೆ. ಈಗ ಆ ಶರೀರದಲ್ಲಿರುವ ಆತ್ಮಕ್ಕೆ ಎರಡು ರೀತಿಯ ಬಾಧ್ಯತೆ ಬರುತ್ತದೆ. ಸಂಚಿತ ಕರ್ಮ ಮತ್ತು ಪ್ರಾರಬ್ಧ ಕರ್ಮ ಎಂಬ ಎರಡು ರೀತಿಯ ಕರ್ಮಗಳನ್ನು ಅನುಭವಿಸಬೇಕಾಗುತ್ತದೆ. ಹುಟ್ಟಿದ ಈ ಜನ್ಮದಲ್ಲಿ ಅನುಭವಿಸಿಯೆ ತೀರಬೇಕಾದ ಕರ್ಮಗಳನ್ನು ಪ್ರಾರಬ್ಧ ಕರ್ಮ, ಹಾಗೆಯೆ ಅನುಭವಿಸದೆ ಉಳಿಯುವ ಕರ್ಮಕ್ಕೆ ಸಂಚಿತ ಕರ್ಮ ಎನ್ನಲಾಗುತ್ತದೆ. ಈ ಎರಡೂ ಕರ್ಮಗಳನ್ನು ಅನುಭವಿಸದೆ ನಿರ್ವಾಹವಿಲ್ಲ. ಹುಟ್ಟಿದ ಜನ್ಮದಲ್ಲಿ ಅನುಭವಿಸಲಾಗದೆ ಉಳಿಯುತ್ತಾ ಹೋಗುವ ಕರ್ಮಫಲ ಮರು ಹುಟ್ಟುಗಳಿಗೆ ಕಾರಣವಾಗುತ್ತಲೆ ಹೋಗುತ್ತದೆ. ಉತ್ತಮ ಕರ್ಮ ಮತ್ತು ನೀಚ ಕೃತ್ಯಗಳ ಫಲಾಫಲಕ್ಕನುಸಾರವಾಗಿ ಜನ್ಮ ಪ್ರಾಪ್ತವಾಗುತ್ತದೆ. ಇದೆಲ್ಲವೂ ಕೂಡ ಪ್ರಕೃತಿಯ ಚೇಷ್ಟಾ ವಿಶೇಷಗಳಲ್ಲಿ ಒಂದು. ಇದನ್ನು ‘ಬ್ರಹ್ಮ ಮಾಯೆ’ ಎನ್ನಲಾಗುತ್ತದೆ.
ಅರ್ಜುನನ ಕೌತುಕ ಇನ್ನಷ್ಟು ಬೆಳೆಯಿತು “ಪರಮಾತ್ಮಾ! ಈ ಮಾಯೆ ಯಾರಿಂದ ಹೇಗೆ ಉಂಟಾಯಿತು? ನನಗೆ ತಿಳಿಸಿಕೊಡಬೇಕು” ಎಂದು ವಿನಂತಿ ಮಾಡಿದನು.
ವಾಸುದೇವನು “ಅರ್ಜುನಾ, ಈ ಮಾಯೆಗೆ ಮೂಲವಾಗಿರುವುದು ಅನಾದಿ ಎಂಬ ಒಂದು ವಿಶೇಷ. ಅದಕ್ಕೆ ಆದಿಯೇ ಇಲ್ಲ. ಪ್ರಾಜ್ಞರು ಅದನ್ನು ಈಶ್ವರ, ಪರಬ್ರಹ್ಮ, ಆದಿ ನಾರಾಯಣ ಎಂಬೆಲ್ಲಾ ರೂಪಗಳಲ್ಲಿ ಕಂಡುಕೊಂಡಿದ್ದಾರೆ. ಈ ಅನಾದಿಯೆ ಪರಮಾತ್ಮ. ಅವನಿಂದಲೆ ಈ ಮಾಯೆ ಸೃಜಿಸಲ್ಪಟ್ಟಿದೆ. ಈ ಮಾಯಾಲೋಕವೆ ಅವನ ಮನೆ. ಜೀವರುಗಳೆಲ್ಲ ಅದರ ನಿವಾಸಿಗಳು ಆಗಿವೆ. ಆತ್ಮಗಳು ಪರಮಾತ್ಮನ ಅಂಶಗಳಾಗಿವೆ. ಈ ಮಾಯೆಯಲ್ಲಿ ಜೀವರುಗಳು ವ್ಯಕ್ತವಾಗಿ ಕಾಣಿಸಿಕೊಂಡು ಅವ್ಯಕ್ತವಾಗುವ ಪರಿಭ್ರಮಣೆ ನಿರಂತರವಾಗಿರುತ್ತದೆ. ಈ ರೂಪಾಂತರವಾಗುವ ಸ್ಥಿತಿಯನ್ನು ನಾಶ ಎನ್ನಲಾಗಿದೆ. ಹೀಗಿರುವಾಗ ಲೋಕ ತಿಳಿದುಕೊಂಡಿರುವ ನಾಶವಾಗಲಿ ಅಸ್ತಿತ್ವವಾಗಲಿ ಕೇವಲ ಭ್ರಮೆ ಆಗಿದೆಯಲ್ಲದೆ ಬೇರೇನೂ ಅಲ್ಲ. ಮಾಯೆಯ ಮುಸುಕಿನೊಳಗೆ ಸಾಗುವ ಈ ಪ್ರಕ್ರಿಯೆ ಹುಟ್ಟು ಮತ್ತು ಸಾವು ಮುಂತಾದ ವಿಪರೀತಗಳಾಗಿ ಪ್ರಕಟವಾಗುತ್ತವೆ. ಪರಮಾತ್ಮನ ಲೀಲಾಮಯವಾದ ಕಾರಣದಿಂದ ಜೀವರುಗಳೆಲ್ಲಾ ಕರ್ಮಗಳನ್ನು ಮಾಡುತ್ತಲೆ ಇರುತ್ತವೆ. ಹೊಂದಿರುವ ಕರ್ಮಫಲಗಳೆ ಬಂಧನರೂಪವಾಗಿ ಜೀವರನ್ನು ಬೆಂಬತ್ತಿ ಬಂದು, ಒಂದು ಇನ್ನೊಂದಕ್ಕೆ ಕಾರಣವಾಗಿ, ಕೊಂಡಿಯಾಗುತ್ತಾ ಮುಂದುವರಿಯುತ್ತದೆ. ಜನ್ಮದಿಂದ ಜನ್ಮಕ್ಕೆ ಅಂತರವಾಗುತ್ತಾ ಹೋಗುತ್ತದೆ. ಅರ್ಜುನಾ ನೀನು ಈಗ ನಿನ್ನೊಳಗೆ ತರ್ಕಿಸಿಕೊಂಡು ಅರ್ಥಮಾಡಿಕೊಳ್ಳಬೇಕು. ಯಾರೂ ಯಾರನ್ನೂ ಕೊಲ್ಲುವುದಿಲ್ಲ – ಯಾರೂ ಕೊಲ್ಲಿಸಿಕೊಳ್ಳುವುದಿಲ್ಲ. ಕೇವಲ ಭ್ರಮಾತ್ಮಕವಾದ ಈ ವ್ಯಾಪಾರದಲ್ಲಿ ದುಃಖಿಸುವ ಅಥವಾ ಸಂತೋಷಪಡುವ ಅಗತ್ಯವೇ ಇಲ್ಲ. ಈ ಸತ್ಯವನ್ನು ತಿಳಿದವರು ಯಾರೂ ಹಾಗೆ ಭಾವ ವ್ಯತ್ಯಾಸಕ್ಕೊಳಗಾಗುವುದಿಲ್ಲ.” ಎಂದು ವಿಸ್ತೃತವಾಗಿ ಶ್ರೀಕೃಷ್ಣನು ಬ್ರಹ್ಮಸತ್ಯವನ್ನು ವಿವರಿಸಿದನು.
ಅರ್ಜುನನು “ಕೃಷ್ಣಾ! ಎಲ್ಲವೂ ಪರಮಾತ್ಮನ ಅಂಶವೆ ಆಗಿದ್ದರೆ ಜೀವರಿಗೂ ಇನ್ನಿತರ ವಸ್ತುಗಳಿಗೂ ವ್ಯತ್ಯಾಸವೇನು? ಎಂದು ಜಿಜ್ಞಾಸೆಗೊಳಗಾಗಿ ಕೇಳಿದನು
ಮುಂದುವರಿಯುವುದು…



















































