ಭಾಗ 310
ಭರತೇಶ ಶೆಟ್ಟಿ , ಎಕ್ಕಾರ್

ಸುಮುಹೂರ್ತದಲ್ಲಿ ವಾದ್ಯಘೋಷದೊಂದಿಗೆ ಚತುರಂಗ ಸೇನೆ ಹೊರಟಿತು. ಆನೆಗಳ ಕೊರಳ ಘಂಟೆಯ ನಾದ, ಕುದುರೆಗಳ ಗೊರಸಿನ ಲಾಳದ ತಾಳ, ರಥ ಚಕ್ರಗಳ ತಿರುಗಣೆಯ ಕಿಂಕಣರವ, ಕಾಲಾಲುಗಳ ಹೆಜ್ಜೆಯ ಸದ್ದು, ಬಂಡಿಗಳ ತಾಕಲಾಟದ ಶಬ್ದ, ಯೋಧರ ಘೋಷಣೆ, ರಣ ವಾದ್ಯಗಳ ಝೇಂಕಾರ, ಆಯುಧಗಳ ಠಂಕಾರ ಎಲ್ಲವೂ ಮಿಳಿತವಾಗಿ ಒಂದು ರೀತಿಯ ರಣ ಗೀತಾ ಮಂಜರಿಯಂತೆ ಕೇಳಿಸತೊಡಗಿತು.
ಹೀಗೆ ಉಪಪ್ಲಾವ್ಯದಿಂದ ಹೊರಟ ಪಾಂಡವ ಸೇನೆ ಕುರುಕ್ಷೇತ್ರದ ಪುಣ್ಯ ಭೂಮಿ ಸ್ಪರ್ಶಿಸುತ್ತಿದ್ದಂತೆ ಶ್ರೀ ಕೃಷ್ಣ ತನ್ನ ಪಾಂಚಜನ್ಯವನ್ನೆತ್ತಿ ರಣ ಭಿಒಕರವಾಗಿ ಶಂಖನಾದ ಮೊಳಗಿಸಿದನು. ಭಯಂಕರ ಧ್ವನಿ ದಿಗ್ದೆಸೆಗಳಿಗೆ ಅಪ್ಪಳಿಸುತ್ತಾ ದಿಕ್ಕು ವಿದಿಕ್ಕುಗಳಲ್ಲಿ ಅಲೆಯಾಗಿ ಮಾರ್ದನಿಸುತ್ತಾ ವ್ಯಾಪಿಸತೊಡಗಿತು. ಕ್ರಮವಾಗಿ ರಣದುಂಧುಬಿ – ಭೇರಿಗಗಳೂ ಬಾರಿಸಲ್ಪಟ್ಟವು. ಅದ್ಬುತವಾದ ಶಬ್ದ ತರಂಗಗಳು ಭೂಮ್ಯಾಕಾಶಗಳನ್ನು ಆವರಿಸತೊಡಗಿದವು.
ಅಲ್ಲಿ ಮುಂಚಿತವಾಗಿ ದುರ್ಯೋಧನನಿಂದ ನಿಯೋಜಿತರಾಗಿ ಕಾವಲು ಕಾಯುತ್ತಿದ್ದ ಶತಾಧಿಕ ಸೈನಿಕರಿದ್ದ ತುಕಡಿ ಪಾಂಡವ ಸೇನಾಸಾಗರವನ್ನು ಕಂಡು ಬೆದರಿತು. ಅದೇ ಸಮಯ ಪಾರ್ಥ ಸಾರಥಿ ಕೃಷ್ಣ ರಣಕ್ಷೇತ್ರಕ್ಕೊಂದು ಸುತ್ತು ಪರ್ಯಟನೆ ಮಾಡಲು ಅರ್ಜುನ ಸಹಿತನಾಗಿ ರಥ ನಡೆಸಿದನು. ಕೃಷ್ಣಾರ್ಜುನರ ವರೂತ ಬರುತ್ತಿದ್ದಂತೆ ನಮ್ಮನ್ನು ಓಡಿಸಲು ಬರುತ್ತಿದ್ದಾರೆಂದು ಹೆದರಿದ ಕೌರವನ ಕಾವಲು ಸೇನೆ ಬೆದರಿ ಓಡತೊಡಗಿತು. ಇತ್ತ ಸಾತ್ಯಕಿ – ದೃಷ್ಟದ್ಯುಮ್ನರು ಜೊತೆಯಾಗಿ ಸೇನಾ ನಿವಾಸ, ಹಾಗು ಇತರ ಸಕಲ ವ್ಯವಸ್ಥೆಗೆ ತಕ್ಕಂತಹ ಸ್ಥಳಗಳನ್ನು ಹುಡುಕತೊಡಗಿದರು. ಕುರುಕ್ಷೇತ್ರದ ಅಂಚಿನಲ್ಲಿ ಹಿರಣ್ಯವತಿ ಎಂಬ ಪವಿತ್ರ ನದಿ ಹರಿಯುತ್ತಿತ್ತು. ಆ ನದಿ ತೀರದ ಸನಿಹದಲ್ಲಿ ಕೆಸರು ಪೊದರುಗಳಿಲ್ಲದ ಕಡೆ ಸಮತಟ್ಟಾದ ಬಯಲು ಪ್ರದೇಶ ಆರಿಸಿ ಬಿಡಾರಗಳ ವ್ಯವಸ್ಥೆ, ಪಾಕಶಾಲೆ, ಆಯುಧ ಭಂಡಾರ, ಆನೆ, ಕುದುರೆ ಲಾಯ, ಶೌಚ ಕೇಂದ್ರಗಳು, ಚಿಕಿತ್ಸಾಲಯಗಳನ್ನೆಲ್ಲ ಸಿದ್ಧಪಡಿಸತೊಡಗಿದರು. ಇವೆಲ್ಲವುಗಳಿಗೆ ಆವರಣವಾಗಿ ಲೋಹದ ಸಲಾಕೆಗಳಿಂದ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯ ಸುತ್ತ ಆನೆಗಳನ್ನು ಕಟ್ಟಿ ಮತ್ತಷ್ಟು ಭದ್ರತೆಯನ್ನು ಮಾಡಿಕೊಂಡರು. ಕೃಷ್ಣಾರ್ಜುನರು ಒಮ್ಮೆ ಬಿಡಾರಾದಿಗಳ ವ್ಯವಸ್ಥೆ – ಭದ್ರತೆ ಪರಿಶೀಲಿಸಿ ತಮ್ಮ ಕೆಲಸಗಾರರ ಕೌಶಲ್ಯವನ್ನು ಮೆಚ್ಚಿದರು. ದೃಷ್ಟದ್ಯುಮ್ನನೂ ಎಲ್ಲೆಡೆ ನೋಡಿ ನಂತರ ಧರ್ಮರಾಯನಿಗೆ ಸಕಲ ಸಿದ್ಧತೆಗಳ ಬಗ್ಗೆ ವಿಚಾರ ತಿಳಿಸಿದನು.
ಹೀಗಿರಲು ಅತ್ತ ಹಸ್ತಿನಾವತಿಗೆ ಓಡಿ ಹೋದ ಸೈನಿಕರು ಕುರುಕ್ಷೇತ್ರದಲ್ಲಿ ಬಂದು ನೆಲೆಸಿದ ಪಾಂಡವ ಸೇನೆಯ ಬಗ್ಗೆ ಸುದ್ದಿ ಮುಟ್ಟಿಸಿದರು. ಕೃಷ್ಣಾರ್ಜುನರು ನಮ್ಮನ್ನು ಓಡಿಸಿದರೆಂದು ದೂರಿಕೊಂಡರು. ಆ ಕೂಡಲೆ ದುರ್ಯೋಧನ ತನ್ನವರಾದ ದುಶ್ಯಾಸನ, ಕರ್ಣ, ಶಕುನಿ ಮತ್ತು ಆಪ್ತವಲಯದವರನ್ನು, ಮಂತ್ರಿಗಳನ್ನೆಲ್ಲ ಕರೆಸಿದನು. ಮಾತ್ರವಲ್ಲ ದ್ರೋಣ, ಕೃಪ, ಅಶ್ವತ್ಥಾಮ, ಶಲ್ಯ ಮೊದಲಾದ ಹಿರಿಯರ ಜೊತೆ ಮಿತ್ರ ರಾಜರನ್ನೂ, ಸಾಮಂತ ಅರಸರನ್ನೆಲ್ಲ ಕರೆದು ಸಭೆ ಸೇರಿದನು. ರಾತ್ರಿಯ ಹೊತ್ತಿಗೆ ಅವಸರದ ಸಭೆ ಆರಂಭವಾಯಿತು. ಅಂದಿನ ಅತಿ ಪ್ರಾಮುಖ್ಯ ವಿಚಾರ ಪಾಂಡವ ಸೇನೆ ಕುರುಕ್ಷೇತ್ರದಲ್ಲಿ ಸಕಲ ಸನ್ನದ್ಧವಾಗಿ ಬಂದು ನೆಲೆಸಿದೆ. ನಮ್ಮ ಜಯಕ್ಕೆ ಬೇಕಾದ ರಣತಂತ್ರ, ಸಿದ್ದತೆಗಳೊಂದಿಗೆ ನಾವು ಮುಂದುವರಿಯಬೇಕು. ಹಾಗಾಗಿ ತುರ್ತಾಗಿ ಈ ಸಭೆ ಕರೆದಿರುವೆನೆಂದು ವಿಷಯ ಪ್ರಸ್ತಾಪಿಸಿದನು.
ಮುಂದುವರಿಯುವುದು



















