
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ನಾನು ಆಗ ಊರಿನಲ್ಲಿ ಇರಲಿಲ್ಲ, ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರತಿಕ್ರಿಯಿಸಿದ್ದು ಅವರ ಹೇಳಿಕೆಗಳನ್ನು ಪತ್ರಿಕೆಯಲ್ಲಿ ನಾನೂ ಗಮನಿಸಿದ್ದೇನೆ. ಆದರೆ ಮಾಹಿತಿ ತಿಳಿಯದೆ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ನಾಯಕರು ಮದ್ದೂರಿಗೆ ಭೇಟಿ ನೀಡುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಡಿಕೆಶಿ ಅವರು, ಬಿಜೆಪಿ ಅವರಿಗೆ ಬೇರೆ ಕೆಲಸವಿಲ್ಲ. ಅವರು ಅಭಿವೃದ್ಧಿ ಮಾಡಿಲ್ಲ. ದೆಹಲಿಗೆ ಹೋಗಿ ನರೇಗಾ, ತೆರಿಗೆ ಹಣ, ಕಾವೇರಿ, ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮತಿ ತರಲಿ. ಅದು ಬಿಟ್ಟು ಮದ್ದೂರಿನಲ್ಲಾದ ಗಲಾಟೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡು ಹಿಂದೂ-ಮುಸ್ಲಿಂ ಅಂತಾ ಡಿವೈಡ್ ಮಾಡುವುದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಕಿ ಹಚ್ಚುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು.



















