ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾಮಗಾರಿ ಕಾರಣ ಎಂಬ ಆರೋಪ

ಮಂಗಳೂರು: ಭೀಕರ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆ ನಲುಗಿ ಹೋಗಿದ್ದು ಮಳೆಯ ಹೊಡೆತಕ್ಕೆ ಅಲ್ಲಿನ ಗುಡ್ಡಗಳೇ ನೆಲಕಚ್ಚುತ್ತಿದೆ. ಮಂಜನಾಡಿಯ ಮೋಂಟೆಪದವು ಗುಡ್ಡಕುಸಿತದಿಂದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ್ದು ಈ ಘಟನೆಗೆ ಗುಡ್ಡದ ಮೇಲೆ ನಡೆಸಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಯೇ ಕಾರಣವೆಂಬ ಆರೋಪ ಕೇಳಿಬಂದಿದೆ.
ಈ ಕುರಿತು ಗಾಯಾಳು ಅಶ್ವಿನಿ ಸಹೋದರ ತೇಜು ಕುಮಾರ್ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಮಂಜನಾಡಿ ಗ್ರಾಮ ಪಂಚಾಯಿತಿ ಪಿಡಿಓ ಚೈತ್ರಾ, ಕೆಆರ್ಡಿಐಎಲ್ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್ಗಳು ಕಾರಣ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರಿನ ಸಾರಾಂಶ:
ನನ್ನ ಅಕ್ಕ ಭಾವ ಅವರ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಮನೆಯ ಹಿಂದೆ ಗುಡ್ಡ ಇದ್ದು, ಗುಡ್ಡದ ಮೇಲೆ ರಸ್ತೆ ಕಾಮಗಾರಿ ನಡೆಸಿದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಆರ್ಡಿಐಎಲ್ ಅಧಿಕಾರಿಗಳು ಕೈಗೊಂಡಿರುತ್ತಾರೆ. ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೈತ್ರ ಹಾಗೂ ಕೆಆರ್ಡಿಐಎಲ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ಗಳು ನಡೆಸಿದ ‘ಅವೈಜ್ಞಾನಿಕ ರಸ್ತೆ ಹಾಗೂ ನಿರ್ಲಕ್ಷದ ಕಾಮಗಾರಿಯಿಂದ ಎರಡು ಮಕ್ಕಳು ಸಹಿತ ಮೂರು ಸಾವು ಸಂಭವಿಸಿದ್ದು, ನನ್ನ ಭಾವನ ತಂದೆಯವರ ಎರಡು ಕಾಲೂ ಮುರಿದಿದ್ದು ನನ್ನ ಅಕ್ಕ ಗಂಭೀರವಾಗಿ ಗಾಯಗೊಂಡು ದೇರಳಕಟ್ಟೆಯ ಜಸ್ಟಿಸ್ ಕೆಎಸ್ ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲು ಆಗಿದ್ದಾರೆ.
ಆದ್ದರಿಂದ ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕೆಆರ್ಡಿಐಎಲ್ ಅಧಿಕಾರಿಗಳು ಸಾವು ನೋವು ಸಂಭವಿಸುವ ಸಾಧ್ಯತೆ ಬಗ್ಗೆ ತಿಳಿದಿದ್ದು ಅವೈಜ್ಞಾನಿಕ ಹಾಗೂ ನಿರ್ಲಕ್ಷ್ಯದ ಕಾಮಗಾರಿಯ ಕೃತ್ಯದಿಂದ ಘೋರ ಸಾವು ನೋವಿಗೆ ಕಾರಣ ಆದ ಅಧಿಕಾರಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ತೇಜು ಕುಮಾರ್ ವಿನಂತಿ ಮಾಡಿದ್ದಾರೆ.






















































