ಕಥೆ (ಭಾಗ- 37)
ಚೇತನ್ ವರ್ಕಾಡಿ

ರಾಘವನಿಗೆ ಬಂದ ಜ್ವರ ಕಡಿಮೆಯಾಗುತ್ತಾ ಬಂತು.ಆ ನೆಪದಲ್ಲಿ ಆದರೂ ಮಗಳನ್ನು ನೋಡುವ ಭಾಗ್ಯ ಸಿಕ್ಕಂತಾಯಿತೆಂದು ತಂದೆ ತಾಯಿ ಇಬ್ಬರಿಗೂ ಆದ ಖುಷಿ ಒಂದುಕಡೆಯಾದರೆ! ಸೌಂದರ್ಯ ಮನೆಗೆ ಬಂದು ಮಂಗಳಳಿಗೆ ಹಾಕಿದ ಸವಾಲುಗಳನ್ನು ನೆನೆಸಿಕೊಂಡರೆ ಭಯ ಹುಟ್ಟಿಸುವಂತಿತ್ತು.ಹೇಗಾದರೂ ಮಾಡಿ ಮಗಳನ್ನು ಆದಷ್ಟು ಬೇಗ ಮದುವೆ ಮಾಡಿ ಕಳುಹಿಸಿ ಕೊಟ್ಟರೆ ತಮ್ಮಲ್ಲಿರುವ ದೊಡ್ಡ ಜವಾಬ್ದಾರಿ ಕಳೆದಂತಾಗುತ್ತೆ ಎಂದು ಇಬ್ಬರೂ ಆಲೋಚಿಸುತ್ತಿದ್ದರು.ಮನೆ ಸೇರಿದ ಮಂಗಳಳ ಮನದೊಳಗೆ ಏನೇನೊ ಆಲೋಚನೆಗಳು,ಕುಳಿತಲ್ಲೇ ಕುಳಿತುಕೊಳ್ಳುವಳು,ಮಾತಿನ ಮಲ್ಲಿಯಾಗಿದ್ದವಳು ಮೌನಕ್ಕೆ ಶರಣಾಗಿದ್ದಾಳೆ.ಸೌಂಧರ್ಯ ತನ್ನನ್ನು ಏತಕ್ಕೆ ಇಷ್ಟೊಂದು ದ್ವೇಷದಿಂದ ನೋಡುತ್ತಿದ್ದಾಳೆ,ನಾನು ಮಾಡಿದ ತಪ್ಪಾದರು ಏನು…?ಹೀಗೆ ತನ್ನೊಳಗೆ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿಕೊಂಡಳು.ಒಂದುಕಡೆ ಸೌಂಧರ್ಯಳ ಚಿಂತೆಯಾದರೆ ಇನ್ನೊಂದು ಕಡೆ ಮಧುವಿನ ಆರೋಗ್ಯದ ಪೂರ್ಣ ಜವಾಬ್ದಾರಿಯನ್ನು ಡಾ ಪ್ರತಾಪ್ ಮಂಗಳಳಿಗೆ ವಹಿಸಿಕೊಟ್ಟಿರುವುದರಿಂದ ಅವನ ಬಗ್ಗೆಯೂ ಆಲೋಚಿಸುತ್ತಿದ್ದಳು.
ದಿನಗಳೆರಡು ಕಳೆಯಿತು.ರಾಘವನ ಜ್ವರವೂ ಪೂರ್ತಿ ಕಡಿಮೆಯಾಯಿತು.
ಅದು ಬೆಳಗ್ಗಿನ ಸಮಯ ರಾಘವ ಮಗಳ ಬಳಿ ಬಂದು ತಲೆನೇವರಿಸುತ್ತಾ ಮಾತುಮುಂದುವರಿಸಿದರು.ಮಗಳೇ ನೀನಿನ್ನೂ ಪೇಟೆಗೆ ಹೋಗೋದು ಬೇಡ ,ದೊಡ್ಡ ಯಜಮಾನ್ರು ಹುಷಾರಾಗುತ್ತಾ ಬರುತ್ತಿದ್ದಾರಲ್ವ!ಮಿಥುನ್ಗೆ ಹೇಳಿ ನಿಮ್ಮಿಬ್ಬರ ಮದುವೆಯನ್ನ ಅದಷ್ಟು ಬೇಗ ಮಾಡಿ ಮುಗಿಸಬೇಕೆಂದಿದ್ದೇನೆ ಎಂದರು. ತಂದೆಯ ಮಾತುಕೇಳಿ ಮಂಗಳ ಯಾಕಪ್ಪ ಇಷ್ಟೊಂದು ಅವಸರ ದೊಡ್ಡ ಯಜಮಾನ್ರು ಪೂರ್ತಿಯಾಗಿ ಗುಣವಾಗಲಿ ಆಮೇಲೆ ಮದುವೆ ವಿಷಯ ಮಾತಾಡಿ,ನಾನೀಗ ಪೇಟೆಗೆ ಹೋಗಬೇಕಪ್ಪಾ ಡಾಕ್ಟರ್ ಹೇಳಿದ ಮಾತನ್ನು ನಡೆಸಿಕೊಡಲು ಅವಕಾಶ ಮಾಡಿಕೊಡಪ್ಪ ಎಂದು ಕೇಳಿಕೊಂಡಾಗಲೂ!ಬೇಡ ಕಾಣೆ ಇದುವರೆಗೆ ನಡೆದದ್ದೇ ಸಾಕು ದೊಡ್ಡವರ ಸಹವಾಸ ನಮಗೆ ಬೇಡ,ನಿನಗೆ ಏನಾದ್ರು ಆದರೆ ನಾವು ಹೇಗೆ ಬದುಕಿರೋದು,ನೀನು ಕೇವಲ ಯಜಮಾನ್ರ ಕಾರಿನಿಂದ ಬಂದುದನ್ನೆ ನೋಡಿದ ಅವ್ರು ನಿನ್ಮೇಲೆ ಏನೇನೊ ಆರೋಪ ಹೊರಿಸಿದ್ರು ಇನ್ನು ಅಲ್ಲೇ ಅವರ ಆರೋಗ್ಯ ವಿಚಾರಿಸುವ ಕೆಲಸದಲ್ಲಿ ಅನ್ನೊದು ಗೊತ್ತಾದ್ರೆ ಇನ್ನೇನೊ ಆಗಿ ಬಿಡುತ್ತೆ….!ಬೇಡಮ್ಮ ಇದಕ್ಕೆಲ್ಲದಕ್ಕೂ ಅಂತ್ಯ ಹಾಡಬೇಕಾದರೆ ಮೊದಲು ಈ ಮನೆಯಲ್ಲಿ ನಿನ್ನ ಮದುವೆಯ ಸಂಭ್ರಮವನ್ನು ನೋಡಬೇಕು,ಅಲ್ಲಿ ತನಕ ಮನೆ ಬಿಟ್ಟು ಎಲ್ಲೂ ಹೋಗಬಾರದು ಎಂದು ಆಜ್ಞೆ ನೀಡಿದಂತೆ ಮರುಮಾತನಾಡದೆ ಗದ್ದೆಯತ್ತ ಹೆಜ್ಜೆಯಿಟ್ಟರು…
ಮಂಗಳಳಿಗೆ ಪಂಜರದೊಳಗಡೆ ಹಾಕಿದ ಹಕ್ಕಿಯಾಂತಾಯಿತು ತನ್ನ ಬದುಕು.ತಾನು ಮಾಡಿದ ತಪ್ಪಾದರೂ ಏನು ತನಗೆ ಏತಕೆ ಈ ಶಿಕ್ಷೆ ಎಂದು ಕಣ್ಣೀರಿಟ್ಟಳು..ಅದೇ ಹೊತ್ತಿಗೆ ಪೋನ್ ರಿಂಗಾಗತೊಡಗಿತು. ರಿಸೀವ್ ಮಾಡಿ ಹಲೋ ಎಂದವಳಿಗೆ ಆಶ್ಚರ್ಯ ಕಾದಿತ್ತು…?


(ಮುಂದುವರಿಯುವುದು)







