
ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಇದರ ಆಶ್ರಯದಲ್ಲಿ ಎನ್. ಸಿ. ಸಿ. ಭೂದಳ ಹಾಗೂ ನೌಕಾದಳದ ಸಹಯೋಗದಲ್ಲಿ ಪ್ರಥಮ ಪದವಿ ತರಗತಿಯ ಎನ್.ಸಿ.ಸಿ. ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವು ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಭಾರತೀಯ ನೌಕಾದಳದ ಕಮಾಂಡರ್ ಅಶ್ವಿನ್ ಎಂ. ರಾವ್ ಮಾತನಾಡುತ್ತಾ, ಭುವನೇಂದ್ರ ಕಾಲೇಜು ಈ ಸಮಾಜಕ್ಕೆ ರಾಜಕೀಯವಾಗಿ, ಸಾಮಾಜಿಕವಾಗಿ ಅನೇಕ ವಿದ್ಯಾರ್ಥಿಗಳನ್ನು ನೀಡಿದೆ. ಕಾರ್ಕಳ ನನ್ನದೇ ಊರಾಗಿರುವುದರಿಂದ ಈ ಕಾಲೇಜಿನ ಬಗ್ಗೆ ನನಗೆ ಅಭಿಮಾನ ಇದೆ. ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಆಯ್ಕೆಯಾಗಬೇಕಾದರೆ, ವಿದ್ಯಾರ್ಥಿ ದೆಸೆಯಲ್ಲಿಯೇ ಬಹಳಷ್ಟು ಪರಿಶ್ರಮ ಪಡಬೇಕು. ನಿಮ್ಮ ಶ್ರಮ ಮತ್ತು ಶಕ್ತಿಯನ್ನು ದೇಶದ ಹಿತಕ್ಕಾಗಿ ಉಪಯೋಗಿಸಬೇಕೇ ಹೊರತು ವ್ಯರ್ಥ ಮಾಡಬಾರದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಬೆಳೆದಾಗಲೇ ಜೀವನ ಪರಿಪೂರ್ಣತೆಯನ್ನು ಪಡೆಯುತ್ತದೆ. ನಿರ್ಧಾರಗಳು ಬದಲಾಗುವಂತಹ ಮನಸ್ಥಿತಿ ವಿದ್ಯಾರ್ಥಿ ಸಮೂಹದಲ್ಲಿ ಇರಬಾರದು. ಯಶಸ್ಸಿನ ಮೂಲ ಶಿಸ್ತು ಆಗಿರುವುದಿಂದ ಅಂತಹ ಶಿಸ್ತನ್ನು ಸದಾ ಕಾಲವೂ ಎನ್.ಸಿ.ಸಿ. ಕೆಡೆಟ್ಸ್ ಹೊಂದಿರಬೇಕು. ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಅನ್ನುವುದು ಇದ್ದೇ ಇರುತ್ತದೆ. ಇವತ್ತಿನ ಯುವ ಸಮೂಹಕ್ಕೆ ತಕ್ಷಣಕ್ಕೆ ಸಮಸ್ಯೆಯ ಪರಿಹಾರ ಬೇಕು. ಇದು ತಾಳ್ಮೆಯನ್ನು ಕಲಿಸುವುದಿಲ್ಲ. ಎನ್.ಸಿ.ಸಿ. ತಾಳ್ಮೆ ಮತ್ತು ಶಿಸ್ತು ಮತ್ತು ತಿಳುವಳಿಕೆಯನ್ನು ಕಲಿಸುತ್ತದೆ. ಎಲ್ಲ ಎನ್.ಸಿ.ಸಿ. ಕೆಡೆಟ್ಸ್ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ನಿಮ್ಮ ನಂತರದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡುತ್ತಾ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸೈನ್ಯಕ್ಕೆ ಸಂಬಂಧಿಸಿದ ಅನೇಕ ಹುದ್ದೆಗಳಿಗೆ ಅರ್ಜಿ ಕರೆಯುತ್ತಿರುತ್ತಾರೆ. ಅದನ್ನು ವಿದ್ಯಾರ್ಥಿಗಳು ತುಂಬುವುದಕ್ಕೆ ಮನಸು ಮಾಡಬೇಕು. ಸಮವಸ್ತ್ರ ವನ್ನು ಕೇವಲ ಧರಿಸುವುದಲ್ಲ, ಅದರ ಮೌಲ್ಯವನ್ನು ದಕ್ಕಿಸಿಕೊಳ್ಳಬೇಕು. ಶೃದ್ಧೆಯ ಕಲಿಕೆಯ ಜೊತೆಗೆ ಕಠಿಣ ಪ್ರಯತ್ನದ ಮೂಲಕ ಉದ್ಯೋಗಕ್ಕೆ ಸಿಗುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.
ವೇದಿಕೆಯಲ್ಲಿ ಪಿ.ಎ. ಸ್ಟಾಫ್ ರಾಹುಲ್ ರಂಜನ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಣಿ ಡಾ. ವಿಜಯ ಕುಮಾರಿ ಎನ್. ಸಿ. ಸಿ. ನೌಕಾದಳದ ಅಧಿಕಾರಿಯಾದ ಗ್ರಂಥಪಾಲಕ ಪ್ರಜ್ವಲ್ ನಾಯ್ಕ್ ಡಿ., ಭೂದಳ ಅಧಿಕಾರಿ ಪವಿತ್ರ ಉಪಸ್ಥಿತರಿದ್ದರು.
ಕೆಡೆಟ್ ಸೃಷ್ಟಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಕೆಡೆಟ್ ಶ್ರೇಯಾ ವಂದಿಸಿದರು.

























































