ಯುವ ಸಮಾಜವು ತಾನೇನು ಮಾಡುತ್ತಿದ್ದೇನೆ ಅನ್ನುವುದರ ಅರಿವನ್ನು ಹೊಂದಿರಬೇಕು: ವಿದ್ವಾನ್ ಯಶವಂತ ಎಂ.ಜಿ.

ಕಲಿಕೆಯ ಅಧ್ಯಯನದ ಜೊತೆಗೆ ಸಂಪಾದಿಸಿದ ಲಲಿತಕಲೆಯ ಪ್ರಯೋಜನ ವಿದ್ಯಾರ್ಥಿಗಳ ಬದುಕಿನಲ್ಲಿ ಬರಬೇಕು ಎಂದಾದರೆ, ಸಾಧನೆಯಲ್ಲಿ ತಾಳ್ಮೆ ಯೇ ಮುಖ್ಯ ಅಂಶವಾಗಿರುತ್ತದೆ. ನಾವು ಬೆಳೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಯುವ ಸಮಾಜ ತಾನೇನು ಮಾಡಬೇಕು
ಅನ್ನುವುದನ್ನು ಮೊದಲು ಅರಿತಿರಬೇಕು. ಕಠಿಣ ಪರಿಶ್ರಮ ಮತ್ತು ಶೃದ್ಧೆ, ಭಕ್ತಿ ಮತ್ತು ಇಚ್ಛಾಶಕ್ತಿಯಿಂದ ಇದ್ದಾಗ ಮಾತ್ರ ಪ್ರತಿಭೆಯನ್ನು ಬೆಳೆಸಲು
ಸಾಧ್ಯವಿದೆ. ಎಲ್ಲೋ ಇರುವ ಪ್ರತಿಭೆಯೊಂದು ವಿಶ್ವದಾದ್ಯಂತ ಅನೇಕ ಕಾಲದವರೆಗೆ ಪಸರಿಸುತ್ತದೆ ಅಂದರೆ,ಆ ಪ್ರಸಿದ್ಧಿಯ ಹಿಂದೆ ಕಠಿಣ ಪರಿಶ್ರಮ
ಅಡಗಿರುತ್ತದೆ ಅನ್ನುವುದು ಸತ್ಯಾನೇ ಆಗಿದೆ.
ಕೆಟ್ಟದ್ದು ಒಳ್ಳೆಯದ್ದು ಎಲ್ಲವೂ ನಾವು ಯೋಚಿಸುವುದರಲ್ಲಿ ಇರುತ್ತದೆ. ಲಲಿತಕಲೆಯನ್ನು ನಂಬಿಕೆಯೊಂದಿಗೆ ಬಳಸಿಕೊಳ್ಳಿ. ಗುರು ಪರಂಪರೆಯನ್ನು
ನೆನಪಿಸುವ ಕ್ರಮವನ್ನು ನಿಮ್ಮ ಬದುಕಿನಲ್ಲಿ ಸದಾ ಇಟ್ಟುಕೊಳ್ಳಿ. ಅವಕಾಶಗಳು ನಿಮ್ಮದಾಗುತ್ತವೆ ಎಂದು ವಿದ್ವಾನ್ ಯಶವಂತ ಎಂ.ಜಿ. ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನ 2025-26 ನೇ ಸಾಲಿನ ಲಲಿತಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ ಮಂಜುನಾಥ ಎ.ಕೋಟ್ಯಾನ್ ಅವರು,ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಭುವನೇಂದ್ರ
ಕಾಲೇಜಿನ ಅನೇಕಾನೇಕ ವಿದ್ಯಾರ್ಥಿಗಳು ದೇಶದ ಎಲ್ಲೆಡೆಯೂ ತಮ್ಮ ಪ್ರತಿಭೆಗಳನ್ನು ಪಸರಿಸಿದವರೇ ಆಗಿದ್ದಾರೆ. ಜಾಗತಿಕ ಮಟ್ಟದಲ್ಲೂ ಸಾಧನೆ
ಮಾಡಿದ್ದಾರೆ. ಈ ವೇದಿಕೆ ಅವರಿಗೆ ಎಲ್ಲ ಪ್ರೋತ್ಸಾಹವನ್ನು ಕೊಟ್ಟಿದೆ. ಸಾಧನೆಗಳ ವಿಚಾರಕ್ಕೆ ಬರುವಾಗ ಅತೃಪ್ತಿಯು ಇದ್ದಾಗ ಮತ್ತಷ್ಟು ಬೆಳೆಯಲು
ಸಾಧ್ಯವಾಗುತ್ತದೆ. ಸಂಗೀತದಲ್ಲಿ ಕಾಲೋಚಿತ ಬೋಧನೆ ಇದ್ದ ಕಾರಣಕ್ಕಾಗಿಯೇ ವಿದ್ವಾನ್ ಯಶವಂತರಂತಹ ಪ್ರತಿಭೆಗಳು ಮತ್ತೆ ಮತ್ತೆ ಹುಟ್ಟಿ
ಬರಲು ಸಾಧ್ಯವಾಗುತ್ತದೆ. ಇವರೆಲ್ಲ ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗುವ ನೆಲೆಯಲ್ಲಿ ಇವತ್ತು ನಮ್ಮ ವೇದಿಕೆಗೆ ಲಭ್ಯವಾದದ್ದು ನಮ್ಮ
ಹೆಮ್ಮೆಯಾಗಿದೆ ಎಂದರು. ವಿದ್ಯೆಯ ಶೃದ್ಧೆ ಮತ್ತು ಗುರು ಪರಂಪರೆಯನ್ನು ಗೌರವಿಸಿಸಿಕೊಳ್ಳುವುದರಿಂದ ಕಲೆ ಒಲಿಯುತ್ತದೆ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ ಈಶ್ವರ ಭಟ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಅಮನ್ ಹೆಗ್ಡೆ, ಪೂಜಾ, ಸನ್ನಿಧಿ
ಕುಲಾಲ್ ಉಪಸ್ಥಿತರಿದ್ದರು.
ಅಂತಿಮ ಬಿ.ಕಾಂ ನ ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ. ನಂದಕಿಶೋರ್ ಕೆ. ಸ್ವಾಗತಿಸಿದರು. ಅಂತಿಮ
ಬಿ.ಕಾಂ.ನ ಧನುಶ್ರೀ ಧನ್ಯವಾದ ಸಮರ್ಪಿಸಿದರು.








