
ಹೊಸಕೋಟೆ: ಶುಕ್ರವಾರ ಬೆಳಗ್ಗೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ನಡೆದ ಭೀಕರ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಮಹತ್ವದ ವಿವರಗಳು ಹೊರಬಿದ್ದಿವೆ. ಬೆಂಗಳೂರಿನ ಕಾಲೇಜೊಂದರ ಪಿಯು ವಿದ್ಯಾರ್ಥಿಗಳ ಅತಿವೇಗದ ಕಾರು ಚಾಲನೆಯೇ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಎಕ್ಸ್ಯುವಿ 700 ಕಾರಿನಲ್ಲಿ ಸಂಚರಿಸುತ್ತಿದ್ದ ಆರು ಮಂದಿ ಪಿಯು ವಿದ್ಯಾರ್ಥಿಗಳು ನೂತನ ಹೆದ್ದಾರಿಯಲ್ಲಿ ಲಾಂಗ್ ಡ್ರೈವ್ಗೆ ಬಂದಿದ್ದರು ಎನ್ನಲಾಗಿದೆ. ಅತಿವೇಗದಲ್ಲಿ ಬಂದ ಕಾರು ಮೊದಲು ಗಗನ್ ಎಂಬವರ ಬೈಕ್ಗೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಟ್ಯಾಂಕರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಟ್ಯಾಂಕರ್ ನ ಆಕ್ಸಲ್ ಕಟ್ ಆಗಿ ಸರ್ವೀಸ್ ರಸ್ತೆಗೆ ಬಿದ್ದಿದೆ. ರಸ್ತೆಯ ಮೇಲೆ ಬಿದ್ದಿದ್ದ ಆಕ್ಸಲ್ಗೆ ಮತ್ತೊಂದು ಬ್ರೀಜಾ ಕಾರು ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬೈಕ್ ಸವಾರ ಸ್ಥಳೀಯ ನಿವಾಸಿಯಾಗಿದ್ದು, ಕಾರಿನಲ್ಲಿದ್ದವರು ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಮುಖ್ಯ ಕಾರಣ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.



















