“ಧರ್ಮದ ವಿಚಾರದಲ್ಲಿ ಸುಳ್ಳು ಹೇಳದೆ, ಸತ್ಯವನ್ನು ಜನರ ಮುಂದಿಡಿ”: ಕಾಂಗ್ರೆಸ್ ಹಿರಿಯ ನಾಯಕ ಸುಬೀತ್ ಕುಮಾರ್ ಎನ್.ಆರ್

ಕಾರ್ಕಳ: ಭಗವಾನ್ ಪರಶುರಾಮರ ನಕಲಿ ಮೂರ್ತಿಯನ್ನು ಕಾರ್ಕಳದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಕಾರ್ಕಳ ಜನರನ್ನು ಮೋಸ ಮಾಡಿರುವುದು ಎಲ್ಲರಿಗೂ ತಿಳಿದ ಕೂಡಲೇ ಈ ವಿಚಾರವನ್ನು ಮರೆ ಮಾಚಲು ಬಿಜೆಪಿ ಕಾರ್ಯಕರ್ತರ ಮೂಲಕ ದಿನಕ್ಕೊಂದು ಹೇಳಿಕೆ ಕೊಡಿಸುತ್ತಿರುವುದು ಜನರ ಹಾದಿ ತಪ್ಪಿಸುವ ಕಾರ್ಯ ಎಂದು ಕಾಂಗ್ರೆಸ್ ಪಕ್ಷದ ಮಾಜಿ ನಗರಾಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಸುಬೀತ್ ಕುಮಾರ್ NR ಹೇಳಿದ್ದಾರೆ.
ಕಾರ್ಕಳ ಎಂಬುದು ನ್ಯಾಯ, ಧರ್ಮ, ಸಂಸ್ಕೃತಿ ತುಂಬಿದ ಊರು. ಈ ಊರಿನಲ್ಲಿ ಸುಳ್ಳು ಹೇಳುವವರಿಗೆ ಯಾವುದೇ ಸ್ಥಾನ ಇಲ್ಲ ಎಂಬುದು ಹಲವಾರು ನಿದರ್ಶನಗಳಿಂದಲೇ ಸಾಬೀತು ಆಗಿದೆ.ಇವೆಲ್ಲಾ ಗೊತ್ತಿದ್ದರೂ ಕೂಡ ಪರಶುರಾಮ ಥೀಮ್ ಪಾರ್ಕನ್ನು ರೂಪಿಸಿ ನಕಲಿ ಪರಶು ರಾಮರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.ಆದರೆ ಈ ವಿಚಾರದ ಸತ್ಯವನ್ನು ಭಗವಾನ್ ಪರಶುರಾಮರೇ ಹೊರ ಹಾಕಿದ್ದಾರೆ. ಆ ವಿಗ್ರಹ ಕಂಚಿನದ್ದು ಅಲ್ಲ. ಫೈಬರ್ ನದ್ದು ಎಂದು ಇಡೀ ರಾಜ್ಯದ ಜನತೆ ತಿಳಿದುಕೊಂಡಿದೆ. ವಿಶ್ವ ಮಟ್ಟದಲ್ಲಿ ಹಿಂದೂ ಧರ್ಮದ ವಿಚಾರದಲ್ಲಿ ಸುನಿಲ್ ಕುಮಾರ್ ರವರು ಕಾರ್ಕಳದ ಮಾನ ಕಳೆದು ಬಿಟ್ಟಿದ್ದಾರೆ ಎಂದು ಸುಬೀತ್ ಕುಮಾರ್ NR ಹೇಳಿದ್ದಾರೆ.
ಸ್ವತ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಈ ನಕಲಿ ಪ್ರತಿಮೆಯ ಬಗ್ಗೆ ಹಾಗೂ ಅದರಲ್ಲಿ ಆದಂತಹ ಗೋಲ್ ಮಾಲ್ ಬಗ್ಗೆ ಅರಿತು ಈ ಯೋಜನೆಯನ್ನೇ ಅಂದಿನ ಸರಕಾರದಿಂದ ರದ್ದು ಮಾಡಿದ್ದಾರೆ.ಈ ವಿಚಾರಗಳೆಲ್ಲ ಬಿಜೆಪಿ ಸರಕಾರ ಅವಧಿಯಲ್ಲಿ ನಡೆದಿದೆ. ಈ ಬಗ್ಗೆ ಸರಕಾರಿ ದಾಖಲೆ ಕೂಡ ಇದೆ. ಆದರೆ ಬಿಜೆಪಿಯ ಅಂಧ ಭಕ್ತರು ಮಾತ್ರ ಈ ವಿಚಾರವನ್ನು ಮರೆ ಮಾಚಲು ದಿನಕ್ಕೆ ಒಬ್ಬರಂತೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ,ಬಿಜೆಪಿಯವರೇ ಧರ್ಮದ ವಿಚಾರದಲ್ಲಿ ಸುಳ್ಳು ಹೇಳಬೇಡಿ. ಪರಶುರಾಮರ ಶಾಪ ನಿಮ್ಮನ್ನು ಬಿಡದು. ಶಾಸಕರ ಸುಳ್ಳಿಗೆ ನೀವು ಬಲಿಯಾಗಬೇಡಿ. ಸತ್ಯವನ್ನು ಜನರ ಮುಂದಿಡಿ ಎಂದು ಕಾಂಗ್ರೆಸ್ ಪಕ್ಷದ ಮಾಜಿ ನಗರಾಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಸುಬೀತ್ ಕುಮಾರ್ NR ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ








