“ಸರಕಾರದ ವೈಫಲ್ಯವನ್ನು ಮರೆಮಾಚಲು, ಆರೋಪ ಅವಹೇಳನದ ರಾಜಕೀಯ ನಾಚಿಕೆಗೇಡಿನ ವಿಚಾರ, ಖಂಡನೀಯ“
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ಕಿಡಿ

ಜುಲೈ17: ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಅಡ್ಡಗಾಲು ಇಟ್ಟು, ಜಿಲ್ಲಾ ಪಂಚಾಯತ್
ಚುನಾವಣೆಗೆ ರಂಗ ತಾಲೀಮು ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯ ಹರಿಕಾರರಾಗಿರುವ ಸುನಿಲ್ ಕುಮಾರ್ ರನ್ನು ಅವಹೇಳನ ಮಾಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದು, ಇಂತಹ ಕುಟಿಲ ತಂತ್ರಕ್ಕೆ ಬಿಜೆಪಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ್ ಹೆಗ್ಡೆ ಹೇಳಿದ್ದಾರೆ.
ಕಳೆದ ಒಂದು ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಚಿಕ್ಕಾಸು ಕೂಡ ಬಿಡುಗಡೆ ಮಾಡದ ಕಾಂಗ್ರೆಸ್ ಸರಕಾರ ಮುಳುಗುತ್ತಿರುವ ಟೈಟಾನಿಕ್ ಹಡಗಿನಂತೆ ಆಗುತ್ತಾ ಸಾಗುತ್ತಿದೆ. ಸರಕಾರ ದಿವಾಳಿ ಆಗುವ ಲಕ್ಷಣ ಕಾಣುತ್ತಿದೆ. ಆದರೆ ಇವೆಲ್ಲವನ್ನೂ ಮರೆ ಮಾಚಿ ನಾಟಕ ಆಡುತ್ತಿರುವ ಕಾಂಗ್ರೆಸ್ ಪಕ್ಷ ತಮ್ಮ ವೈಫಲ್ಯ ಮರೆ ಮಾಚಲು ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾದ ಸುನಿಲ್ ಕುಮಾರ್ ರ ಸಾಧನೆಯನ್ನು ಅವಹೇಳನ ಮಾಡಲು ಹೊರಟಿರುವುದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಸುನಿಲ್ ಕುಮಾರ್ ಅವಧಿಯಲ್ಲಿ ಕಾರ್ಕಳ ತಾಲೂಕಿನ ಪ್ರತಿ ಗ್ರಾಮೀಣ ಮಟ್ಟಕ್ಕೂ ರಸ್ತೆ ಆಗಿದೆ. ಅದು ಕೂಡ ಕಾಂಕ್ರೀಟ್ ನದ್ದು. ಕಿಂಡಿ ಆಣೆಕಟ್ಟುಗಳಾಗಿವೆ. ಸಾವಿರಾರು ಮಂದಿ ಈ ಅನುದಾನಗಳ ಫಲಾನುಭವಿಗಳಾಗಿದ್ದಾರೆ. ಆದರೆ ಇದರ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಟಕೀಯದ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಚಾರ ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ








