
ಮಂಗಳೂರು: “ಒಬ್ಬ ಉದ್ಯಮಿಯ ಪ್ರಯಾಣವು ಸಹನಶೀಲತೆಯಿಂದ ರೂಪುಗೊಳ್ಳುತ್ತದೆ. ಇದು ಸೋಲೊಪ್ಪಿಕೊಳ್ಳದ ಹೋರಾಟವನ್ನೂ ಪ್ರತಿಯೊಂದು ವಿಫಲತೆಯಿಂದ ಕಲಿಯುವ ಜಾಳ್ಮೆಯನ್ನೂ ಹಾಗೂ ವಿನಮ್ರತೆಯನ್ನೂ ಅಪೇಕ್ಷಿಸುತ್ತದೆ’ ಎಂದು ಖ್ಯಾತ ಉದ್ಯಮಿ ಹಾಗೂ ಸಂಜೀತ್ ಶೆಟ್ಟಿ ಲೀಡರ್ಸ್ ಫೆಲೋಶಿಪ್ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿ ಸುಯೋಗ್ ಶೆಟ್ಟಿ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಹಾಗೂ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮಾತನಾಡಿ, ಸವಾಲುಗಳನ್ನು ಎದುರಿಸುವಾಗ ಧನಾತ್ಮಕ ಮನೋಭಾವವನ್ನು ಉಳಿಸಿಕೊಳ್ಳುವ ಮಹತ್ವವನ್ನು ಉಲ್ಲೇಖಿಸಿದರು.
ಈ ವರ್ಷದ ಪ್ರಶಸ್ತಿ ವಿಜೇತರನ್ನು NMAMIT ನಿರ್ದೇಶಕ ಯೋಗೀಶ್ ಹೆಗ್ಡೆ ಹಾಗೂ ಪ್ರಾಂಶುಪಾಲ ಪ್ರೊ. ನಿರಂಜನ್ ಚಿಪುಂರ್ಕ ಗೌರವಿಸಿದರು. 2012 ರಲ್ಲಿ ಸ್ಥಾಪಿತವಾದ ನಂಜೀತ್ ಶೆಟ್ಟಿ ಲೀಡರ್ಸ್ ಫೆಲೋಶಿಪ್, ಸಂಜೀತ್ ಶೆಟ್ಟಿ ಪ್ರತಿಷ್ಠಾನದ ನೇತೃತ್ವದಲ್ಲಿ ಈ ವರ್ಷ ತನ್ನ 13ನೇ ವರ್ಷವನ್ನು ಪೂರೈಸುತ್ತಿದೆ. ಈ ವರೆಗೆ, ಈ ಕಾರ್ಯಕ್ರಮದ ಮೂಲಕ 98 ಜನ ಶ್ರೇಷ್ಠ ವ್ಯಕ್ತಿಗಳಿಗೆ ಅತ್ಯುನ್ನತ ಸಾಧನ ಪ್ರಶಸ್ತಿಯನ್ನು ನೀಡಿ, ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಸಮಾಜಮುಖಿ ಸೇವೆಗಳನ್ನು ಗೌರವಿಸಿದೆ.
ಸಂಜೀತ್ ಶೆಟ್ಟಿ ಲೀಡರ್ಸ್ ಫೆಲೋಶಿಪ್ ಕೇವಲ ಪ್ರಶಸ್ತಿ ನೀಡುವ ಕಾರ್ಯಕ್ರಮವಲ್ಲ. ಇದು ಸೇವಾ ಪ್ರಧಾನ ನಾಯಕತ್ವದ ಮನೋಭಾವವನ್ನು ವರ್ಧಿಸಲು ಶ್ರಮಿಸುತ್ತದೆ ಹಾಗೂ ಸಮಾಜದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಹೊಸ ತಲೆಮಾರಿಗೆ ಪ್ರೇರಣೆ ನೀಡುತ್ತದೆ. ಸಂಜೀತ್ ಶೆಟ್ಟಿ ಪ್ರತಿಷ್ಠಾನವು ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಅಂತರವನ್ನು ನೀಗಿಸಲು, ಮೂಲಭೂತ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲು, ಪುರುಷರ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು, ಭಾರತದ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯನ್ನು ಸಂರಕ್ಷಿಸಲು ಹಾಗೂ ಮಹಿಳಾ ನಾಯಕತ್ವವನ್ನು ಬೆಂಬಲಿಸಲು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ.






















































