
ಇತ್ತೀಚಿಗೆ ಚೆನ್ನೈನಲ್ಲಿ ನಡೆದ ‘ಥಗ್ ಲೈಫ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ವಿರುದ್ಧ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ನಟ ಮತ್ತೆ ಮೊಂಡಾಟ ಬಿಡದೆ ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಉದ್ಧಟತನ ತೋರಿದ್ದಾರೆ.
ಕೇರಳದಲ್ಲಿ ನಡೆದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ತಮಿಳುನಾಡು ಒಂದು ವಿಶಾಲ ಹೃದಯ ರಾಜ್ಯ. ಮಲಯಾಳಲಂನ ಮೆನನ್, ತೆಲುಗಿನ ರೆಡ್ಡಿ, ಕನ್ನಡದ ಐಯ್ಯಂಗಾರ್ ತಮಿಳುನಾಡು ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಭಾಷೆ ಬಗ್ಗೆ ಆಳವಾದ ಚರ್ಚೆಗಳು ನಡೆಯಲಿ. ಇದನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ತಜ್ಞರಿಗೆ ಬಿಡೋಣ ಎಂದು ಸ್ಪಷ್ಟನೆ ನೀಡಿದರು.
ನಾನು ಪ್ರೀತಿಯಿಂದಲೇ ಹೇಳಿದ್ದು, ನಾನು ಸಮಸ್ಯೆಗೆ ಸಿಲುಕಿದಾಗ ನನಗೆ ಬೆಂಬಲವಾಗಿ ಕನ್ನಡಿಗರು ನಿಂತಿದ್ರು. ಚೆನ್ನೈನಲ್ಲಿ ಸಮಸ್ಯೆ ಆದಾಗ ಕನ್ನಡಿಗರು ಸಪೋರ್ಟ್ ಮಾಡಿದ್ರು. ನನ್ನ ಸಿನಿಮಾಗಳನ್ನ ಅಭಿಮಾನಿಗಳು ನೋಡ್ತಾರೆ, ರಾಜಕಾರಣಿಗಳಿಗೆ ಭಾಷಾ ಜ್ಞಾನ ಇಲ್ಲ. ನನ್ನ ಪ್ರಕಾರ ನನ್ನ ಹೇಳಿಕೆ ಸರಿ ಇದೆ ಎಂದು ಸಮರ್ಥನೆ ನೀಡಿದ್ದಾರೆ.






















































