
ಅಜೆಕಾರು, ಜು. 26: ಅಜೆಕಾರು ಪದ್ಮಗೋಪಾಲ್ ಸಭಾಂಗಣದಲ್ಲಿ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ‘ದೇಶಸುಧಾ’ 2ನೇ ಮಾಲಿಕೆ ಹಾಗೂ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಜಾಪುರದ ಮಂಜುನಾಥ ಮ. ಜು. ನಗೊಂಡ ಅವರು “ಹೃದಯದಲ್ಲಿ ದೇಶಪ್ರೇಮ, ಉಸಿರಿನಲ್ಲಿ ಭಾರತ ಸ್ವರಾಜ್ಯ – ಛತ್ರಪತಿ ಶಿವಾಜಿ ಮಹಾರಾಜ್” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಜೀವನ, ರಾಷ್ಟ್ರಭಕ್ತಿ, ಸ್ವರಾಜ್ಯದ ಪರಿಕಲ್ಪನೆ ಹಾಗೂ ಯುವಜನರಲ್ಲಿ ದೇಶಪ್ರೇಮ ಬೆಳೆಸುವ ಅಗತ್ಯವನ್ನು ಮನದಟ್ಟಾಗುವಂತೆ ವಿವರಿಸಿದರು.

ಕಾರ್ಗಿಲ್ ವಿಜಯ ದಿನದ ಅಂಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಸಬ್ ಇನ್ಸ್ಪೆಕ್ಟರ್ ಆಗಿ ಆಯ್ಕೆಯಾದ ಸಂಹಿತ್ ಎಸ್. ಹೆಗ್ಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕರಾದ ಲಕ್ಷ್ಮಣ ಅವರು ದೇಶಭಕ್ತಿ ಗೀತೆಯನ್ನು ಹಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರ “ಉಸಿರಿಗಿಂತ ದೇಶ ದೊಡ್ಡದು” ಎಂಬ ದೇಶಪ್ರೇಮದ ಚಿಂತನೆಯೊಂದಿಗೆ ಕಾರ್ಯಕ್ರಮವು ರಾಷ್ಟ್ರಭಕ್ತಿ ಹಾಗೂ ಮೌಲ್ಯಗಳ ಸಂದೇಶ ಸಾರುವ ರೀತಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್ ಹಾಗೂ ವಿದ್ಯಾ, ಸ್ಟೂಡೆಂಟ್ ಕೌನ್ಸಿಲರ್ ಪ್ರಸನ್ನ ಹೆಗ್ಡೆ, ಮಹಾಗಣಪತಿ ದೇವಸ್ಥಾನ, ಪದ್ಮನಗರ–ಅಜೆಕಾರು ಇದರ ಸರ್ವ ನಿರ್ದೇಶಕರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸರ್ವ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ದೇಶಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಸವಿ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ಶಿಕ್ಷಕಿ ವಿಜೇತಾರಾಣಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.






















































