ಪಾಕ್ ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ

ನವದೆಹಲಿ: ಶಿವಸೇನೆ-ಯುಬಿಟಿ ನಾಯಕಿ ಪ್ರಿಯಾಂಕಾ ಚತುರ್ವೇದಿ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ದುರಂತ ಸಾವಿಗೆ ಕಾರಣವಾದ ದುಬೈ ಏರ್ ಶೋನಲ್ಲಿನ ತೇಜಸ್ ವಿಮಾನ ಅಪಘಾತವನ್ನು ಲೇವಡಿ ಮಾಡಿದ್ದಕ್ಕಾಗಿ ಪಾಕಿಸ್ತಾನದ ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಕಿಡಿಕಾರಿದ್ದಾರೆ.
“ಕೆಲವು ಪಾಕಿಸ್ತಾನಿ ಸೋಶಿಯಲ್ ಮೀಡಿಯಾ ಖಾತೆಗಳು ತೇಜಸ್ ಅಪಘಾತವನ್ನು ಅಪಹಾಸ್ಯ ಮಾಡುತ್ತಿವೆ. ಅಕ್ಷರಶಃ ವಿಶ್ವಬ್ಯಾಂಕ್ ಮತ್ತು ಐಎಂಎಫ್ ನೆರವಿನಿಂದ ಬದುಕುವ ಭಯೋತ್ಪಾದಕ ದೇಶದಲ್ಲಿ ವಾಸ ಮಾಡುತ್ತಿದ್ದೀರಿ ಅನ್ನೋದನ್ನು ನೆನಪಿಸಿಕೊಳ್ಳಿ. ಮೇಡ್-ಇನ್-ಚೀನಾ ಆಟಿಕೆಗಳನ್ನು ಮಾತ್ರ ಹೊಂದಿರುವ ಜನರು ಸ್ಥಳೀಯ ರಕ್ಷಣಾ ಫೈಟರ್ ಜೆಟ್ಗಳ ಬಗ್ಗೆ ಮಾತನಾಡುವ ಕೊನೆಯ ವ್ಯಕ್ತಿಯಾಗಿರಬೇಕು. ಈ ಜನರು ಆತ್ಮಹತ್ಯಾ ಬಾಂಬರ್ ಸ್ಕ್ವಾಡ್ಗಳನ್ನು ಮಾತ್ರ ರಚಿಸಬಹುದು” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಮಾನ ಪತನ:
ಶುಕ್ರವಾರ ದುಬೈ ಏರ್ ಶೋ 2025 ರಲ್ಲಿ ಎಂಟು ನಿಮಿಷಗಳ ವೈಮಾನಿಕ ಪ್ರದರ್ಶನದ ಸಮಯದಲ್ಲಿ ತೇಜಸ್ ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಪೈಲಟ್, ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅಪಘಾತದಲ್ಲಿ ಸಾವನ್ನಪ್ಪಿದರು. ದುಬೈ ವರ್ಲ್ಡ್ ಸೆಂಟ್ರಲ್ನಲ್ಲಿರುವ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಭಾರೀ ಪ್ರಮಾಣದ ಬೆಂಕಿ ಕಂಡಿತು. ಅಪಘಾತದ ನಂತರ ಸೈರನ್ಗಳು ಮೊಳಗುತ್ತಿದ್ದಂತೆ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸಿದ, ಸ್ಥಳೀಯ ಲಘು ಯುದ್ಧ ವಿಮಾನ (LCA) ತೇಜಸ್ ಸ್ಥಳೀಯ ಸಮಯ ಮಧ್ಯಾಹ್ನ 2.10 ರ ಸುಮಾರಿಗೆ (IST ಮಧ್ಯಾಹ್ನ 3:40) ಅಪಘಾತಕ್ಕೀಡಾಯಿತು.









