
ನವದೆಹಲಿ: ಕೇಂದ್ರ ಸರ್ಕಾರವು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ದೀಪಾವಳಿ ಹಬ್ಬಕ್ಕೆ ಗಿಫ್ಟ್ ನೀಡಿದ್ದು ಅದೇನೆಂದರೆ, ಮತ್ತೊಮ್ಮೆ ಭಾರತ್ ಬ್ರಾಂಡ್-2.0 ಅನ್ನು ಆರಂಭಿಸಿ ಜನತೆಗೆ ಸಂತಸ ನೀಡಿದೆ.
ಲೋಕಸಭೆ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಭಾರತ್ ಬ್ರ್ಯಾಂಡ್ ಅಕ್ಕಿ ಜೊತೆ ಮೂರು ಧಾನ್ಯಗಳು ಬೆಂಗಳೂರಲ್ಲಿ ಇಂದಿನಿಂದ ಜನರಿಗೆ ಸಿಗಲಿವೆ.
ಬೆಲೆ ಏರಿಕೆಯ ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ವಿವಿಧ ಪ್ರಯತ್ನಗಳನ್ನು ನಡೆಸುತ್ತಿದ್ದು ಈ ಹಿಂದೆ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡಿತ್ತು. ಆದರೆ ಲೋಕಸಭಾ ಚುನಾವಣೆ ನೀತಿಸಂಹಿತೆ ಹಿನ್ನೆಲೆ, ಸ್ಥಗಿತಗೊಂಡಿದ್ದ ಭಾರತ್ ಬ್ರಾಂಡ್ 2.0ವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪ್ರಾರಂಭಿಸಿದೆ. ಇದರ ಭಾಗವಾಗಿ ಇಂದಿನಿಂದ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಅಕ್ಕಿ, ಗೋಧಿಹಿಟ್ಟು, ಕಡಲೆಬೇಳೆ, ಹೆಸರು ಬೇಳೆಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ.
ಈ ಹಿಂದೆ ಭಾರತ್ ರೈಸ್ ಕೆ.ಜಿಗೆ 29 ರೂಪಾಯಿ ಇದ್ದು ಇದೀಗ ಇದರ ಬೆಲೆ 34 ರೂಪಾಯಿ ಆಗಿದೆ. ಹಾಗೆಯೇ ಗೋದಿ ಹಿಟ್ಟು ಕೆ.ಜಿಗೆ 30 ರೂಪಾಯಿ, ಕಡಲೆಬೇಳೆ 70 ರೂಪಾಯಿ, ಹೆಸರುಬೇಳೆ 107 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.









