
ಕಲಿಯುಗದ ವೈಕುಂಠ ಎಂದೇ ಕರೆಯಲಾಗುವ ಹಿಂದೂಗಳ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ನಿಯಮಿತವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ತಿಮ್ಮಪ್ಪನ ದರ್ಶನವನ್ನು ನೀಡುತ್ತದೆ. ಆದರೆ ಈ ಪವಿತ್ರ ದೇವಾಲಯದಲ್ಲಿ ಇತರ ಧರ್ಮದ ಜನರು ಕೆಲಸ ಮಾಡುವ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿದ್ದು ಹಿಂದೂ ದೇಗುಲಗಳಲ್ಲಿ ಅನ್ಯ ಧರ್ಮದವರಿಗೆ ಉದ್ಯೋಗ ನೀಡಬಾರದು ಹಾಗೂ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಕೂಡ ಮಾಧ್ಯಮಗಳ ಮೂಲಕ ಈ ವಿಷಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.
ಸದ್ಯ 1000ಕ್ಕೂ ಹೆಚ್ಚು ಅನ್ಯಧರ್ಮೀಯ ನೌಕರರಿದ್ದು, ಇವರಲ್ಲಿ ಕೆಲವರು ಟಿಟಿಡಿಯ ಖಾಯಂ ನೌಕರರು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಟಿಟಿಡಿ ಮತ್ತು ಪ್ರಸ್ತುತ ಎಪಿ ಸರ್ಕಾರ ತಿರುಮಲದ ಪಾವಿತ್ರ್ಯತೆಯನ್ನು ರಕ್ಷಿಸಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದ್ದು ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್) ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ನಾಯ್ಡು ಮಾಹಿತಿ ನೀಡಿದರು.



















