
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರ ವಿರುದ್ಧ ಹೊರಬಿದ್ದ ವಿಡಿಯೋ ಹಗರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ವಿಡಿಯೋಗಳು ನಕಲಿ ಅಥವಾ ಎಐ ಮೂಲಕ ಸೃಷ್ಟಿಸಲ್ಪಟ್ಟವು ಎಂಬ ಅವರ ಹೇಳಿಕೆಯನ್ನು ತಳ್ಳಿ ಹಾಕಿದ ವಿಧಿ ವಿಜ್ಞಾನ ಪ್ರಯೋಗಾಲಯ
ಎಫ್ಎಸ್ಎಲ್ ಪರಿಶೀಲನೆಯಲ್ಲಿ ಈ ವಿಡಿಯೋಗಳಲ್ಲಿ ಯಾವುದೇ ಎಡಿಟಿಂಗ್ ಅಥವಾ ಕೃತಕ ತಂತ್ರಜ್ಞಾನ ಬಳಕೆ ಇಲ್ಲದೆ, ಅವು ಅಸಲಿ ಎನ್ನುವುದು ದೃಢಪಟ್ಟಿದೆ. ಇದರಿಂದ ರಾಮಚಂದ್ರ ರಾವ್ ಅವರ ವಾದಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಎಡಿಜಿಪಿ ಆರ್ ಹಿತೇಂದ್ರ ನೇತೃತ್ವದ ತನಿಖಾ ಸಮಿತಿ ಸುದೀರ್ಘ ಪರಿಶೀಲನೆ ನಡೆಸಿ ಸುಮಾರು 100 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವಿಡಿಯೋಗಳು 2016-17ರಲ್ಲಿ ಅವರು ಬೆಳಗಾವಿ ಐಜಿಪಿ ಆಗಿದ್ದಾಗ ಅವರ ಕಚೇರಿಯಲ್ಲೇ ಚಿತ್ರೀಕರಿಸಲ್ಪಟ್ಟಿವೆ ಎಂದು ವರದಿ ಸೂಚಿಸಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈಗಾಗಲೇ ಅವರನ್ನು ಅಮಾನತುಗೊಳಿಸಿತ್ತು. ಇದೀಗ ಎಫ್ಎಸ್ಎಲ್ ವರದಿ ಬಂದ ಹಿನ್ನೆಲೆ, ಅವರ ವಿರುದ್ಧ ಮುಂದಿನ ಕಠಿಣ ಕ್ರಮಗಳತ್ತ ಗಮನ ಹರಿಸಿದೆ. ಅಧಿಕಾರದ ದುರುಪಯೋಗ ಮತ್ತು ನೈತಿಕ ತಪ್ಪುಗಳ ಆರೋಪಗಳು ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದಿವೆ.






















































