ಮಸ್ತಕಾಭಿಷೇಕ ವೇಳೆಗೆ, ಥೀಂ ಪಾರ್ಕ್ ವೀಕ್ಷಣೆಗೆ ಅವಕಾಶದ ಆಶಯ: ಶಾಸಕ ವಿ.ಸುನಿಲ್ ಕುಮಾರ್

ಪರಶುರಾಮ ಥೀಂ ಪಾರ್ಕ್ ನಲ್ಲಿ ಜ.14 ರಿಂದ ಸ್ವಚ್ಚತಾ ಕಾರ್ಯ ನಡೆಸಲು ಹಾಗೂ ನಿರಂತರ ಒಂದು ತಿಂಗಳು ಕಾಲ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡುವಂತೆ ನಾನು ಬರೆದ ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ.
ಪರಶುರಾಮ ಥೀಂ ಪಾರ್ಕ್ ಸ್ವಚ್ಚತೆ ಹಾಗೂ ಭದ್ರತೆ ವಿಚಾರದಲ್ಲಿ ಜ.೧೦ ರೊಳಗಾಗಿ ಅನುಸರಣಾ ವರದಿ ನೀಡುವಂತೆ ಜಿಲ್ಲಾಡಳಿತ ನಿರ್ಮಿತಿ ಕೇಂದ್ರಕ್ಕೆ ಸೂಚಿಸುವ ಜತೆಗೆ ಸ್ವಚ್ಚತಾ ಕಾರ್ಯವನ್ನು ಇಲಾಖೆಯಿಂದಲೇ ನಿರ್ವಹಿಸುವಂತೆ ಆದೇಶಿಸಿದೆ. ಥೀಂ ಪಾರ್ಕ್ ವಿಚಾರದಲ್ಲಿ ನಮ್ಮ ಕಾಳಜಿ ಏನೆಂಬುದನ್ನು ಸರ್ಕಾರ ಕೊನೆಗೂ ಒಫ್ಪಿಕೊಂಡಂತಾಗಿದೆ ಎಂದು ಮಾಜಿ ಸಚಿವರು , ಶಾಸಕರಾದ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಥೀಂ ಪಾರ್ಕ್ ಸ್ವಚ್ಚತೆಯ ಜತೆಗೆ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಇದರ ಜತೆಗೆ ತಿಂಗಳು ಪೂರ್ತಿ ಥೀಂ ಪಾರ್ಕ್ ನಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮೂಲಕ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಬೇಕು. ಇದು ಸಾಧ್ಯವಾಗದೇ ಇದ್ದರೆ ಕ್ಷೇತ್ರದ ಒಂದೊಂದು ಯುವಕ ಸಂಘಕ್ಕೆ ಒಂದೊಂದು ದಿನ ಈ ಜವಾಬ್ದಾರಿ ನೀಡುವಂತೆ ಆಗ್ರಹಿಸುತ್ತೇನೆ.
ಇದೆಲ್ಲದರ ಜತೆಗೆ ಮುಂದಿನ ವರ್ಷ 2027 ಕ್ಕೆ ಕಾರ್ಕಳದ ಶ್ರೀ ಬಾಹುಬಲಿ ಮೂರ್ತಿಗೆ ಮಹಾಮಸ್ತಾಭಿಷೇಕ ನಡೆಯಲಿದೆ. ಆ ಅವಧಿಯೊಳಗೆ ಪರಶುರಾಮ ಥೀಂ ಪಾರ್ಕ್ ಯೋಜನೆ ಪೂರ್ಣಗೊಳ್ಳಬೇಕು. ಮಸ್ತಕಾಭಿಷೇಕಕ್ಕೆ ಬಂದವರು ಪರಶುರಾಮ ಥೀಂ ಪಾರ್ಕ್ ನ್ನೂ ನೋಡಿ ಹೋಗುವುದಕ್ಕೆ ಅವಕಾಶ ಸೃಷ್ಟಿಯಾಗಬೇಕು. ಜಿಲ್ಲಾಡಳಿತ ಈ ದಿಶೆಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಆಶಿಸುತ್ತೇನೆ ಎಂದು ಶಾಸಕ ವಿ ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















