ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದನಗಳ್ಳರು

ಕಾರ್ಕಳ : ಮಾ. 01ರಂದು ದನಗಳನ್ನು ಕಳವು ಮಾಡಿ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡುವಿನಲ್ಲಿ ನಡೆದಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ನೀರೆ ಬೈಲೂರು ಭಾಗದಲ್ಲಿ ರೌಂಡ್ಸ್ ಕರ್ತವ್ಯ ಮುಗಿಸಿ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕಾರ್ಕಳದತ್ತ ಬರುತ್ತಿದ್ದಾಗ, ಹಾರ್ಜೆಡ್ಡು ಶ್ರೀ ದೇವಿ ಕೃಪಾ ಹಾಲ್ ಮುಂಭಾಗ ರಸ್ತೆ ಬದಿಯಲ್ಲಿ ಟಾಟಾ ಇಂಟ್ರಾ ಕಂಪನಿಯ ಗೂಡ್ಸ್ ವಾಹನವೊಂದು ಕಾರ್ಕಳದತ್ತ ಮುಖ ಮಾಡಿ ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ವಾಹನದ ಹಿಂಭಾಗದಿಂದ ನೀರು ಹರಿಯುತ್ತಿರುವುದು ಹಾಗೂ ಚಾಲಕ ತರ್ಪಾಲನ್ನು ಸರಿಪಡಿಸುತ್ತಿರುವುದು ಅನುಮಾನಕ್ಕೆ ಕಾರಣವಾಯಿತು.
ತಕ್ಷಣವೇ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ಅದರೊಳಗೆ ಎರಡು ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ಪ್ರಾಥಮಿಕ ತನಿಖೆಯಲ್ಲಿ ದನಗಳನ್ನು ಕಳವು ಮಾಡಿ ಕಸಾಯಿಖಾನೆಗೆ ವಧೆ ಮಾಡಲು ಕರೆದೊಯ್ಯಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.






