ಸಾಹಿತ್ಯಕ್ಕೂ ಜೀವನಕ್ಕೂ ಅವಿನಾಭಾವ ಸಂಬಂಧ : ಡಾ.ವಿದ್ಯಾಲತಾ

ಭುವನೇಂದ್ರ ಕಾಲೇಜಿನ 2025-26 ನೇ ಸಾಲಿನ ಸಾಹಿತ್ಯ ಸಂಘದ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
;ಸಾಹಿತ್ಯ ಮತ್ತು ಜೀವನ ; ಇದರ ಕುರಿತಾಗಿ ಎಸ್.ಎಂ.ಎಸ್.ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ವಿದ್ಯಾಲತಾ ಮಾತನಾಡುತ್ತಾ,
ಜೀವನದ ಅವಿಭಾಜ್ಯ ಅಂಗವೇ ಸಾಹಿತ್ಯ. ಮನುಷ್ಯ ತಾನು ನೋಡಿದ್ದನ್ನು, ಕೇಳಿದ್ದನ್ನು, ಓದಿದ್ದನ್ನು ಅಕ್ಷರಗಳ ಮೂಲಕ ಕಟ್ಟಿ ಸಮಾಜಕ್ಕೆ
ತಲುಪಿಸುತ್ತಾನೆ. ಹಾಗೆ ತಲುಪಿಸಿದವು ಓದುಗರಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ. ಸುಸಂಸ್ಕೃತ ಬದುಕನ್ನು
ರೂಪುಗೊಳಿಸುವ, ಪ್ರಶ್ನೆ ಹುಟ್ಟಿಕೊಳ್ಳುವ ಸಾಹಿತ್ಯ ಸದಾ ರಚನೆಯಾಗಬೇಕು.
ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಓದುವುದರಿಂದ ಜ್ಞಾನವನ್ನು ಪಡೆಯುವುದಷ್ಟೇ ಅಲ್ಲದೆ, ಮನಸ್ಸಿನ ದುಃಖ, ದುಗುಡ,
ದುಮ್ಮಾನವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ಬದುಕನ್ನು ಅಹಂಕಾರದಿಂದ ಎದುರಿಸದೆ ತಮ್ಮ ಪಾಡಿಗೆ ತಾನಿರುವುದೇ ಬದುಕಿನ
ಸಾರ್ಥಕತೆಯಾಗಬೇಕು. ಸಾಹಿತ್ಯವನ್ನು ಅನುಭವಿಸಿ ನಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಗಲಿದ ಕನ್ನಡದ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರನ್ನು
ನೆನಪಿಸಿಕೊಳ್ಳಲಾಯಿತು. ಭಾವಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನೆನಪಿನಲ್ಲಿ ಅವರ ಭಾವಗೀತೆಗಳನ್ನು ವಿದ್ಯಾರ್ಥಿಗಳು
ಹಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ ಮಂಜುನಾಥ ಎ. ಕೋಟ್ಯಾನ್ ಮಾತನಾಡುತ್ತಾ, ವ್ಯಕ್ತಿತ್ವದ ಸರ್ವಾಂಗೀಣ
ಬೆಳವಣಿಗೆಗೆ ಸಾಹಿತ್ಯ ಸಹಕಾರಿಯಾಗುತ್ತದೆ. ಸಾಹಿತ್ಯ ಬಹಳ ದೊಡ್ಡ ಜ್ಞಾನ ಸಂಪತ್ತು. ಅವಮಾನವನ್ನು ಗೆದ್ದಾಗ ಬದುಕನ್ನು ಗೆಲ್ಲುವುದು
ಸುಲಭವಾಗುತ್ತದೆ. ಸಾತ್ವಿಕ ಮನಸುಗಳಿಗೆ ಆಗುವ ನೋವು ಕೂಡಾ ಒಳ್ಳೆಯ ಸಾಹಿತ್ಯವನ್ನು ಸೃಷ್ಟಿ ಮಾಡಬಲ್ಲದು. ನಮ್ಮಲ್ಲಿ ಪರಿಪೂರ್ಣವಾದ
ಸಂವೇದನಾಶೀಲತೆಯಿರುವ ಮಾನವತಾವಾದ ಇರಬೇಕು. ನಮ್ಮ ಆದ್ಯತೆಗಳು ಯಾವುದೇ ಆದರೂ ಆಸಕ್ತಿ ಮಾತ್ರ ಸಾಹಿತ್ಯದ್ದಾಗಿರಬೇಕು
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ಈಶ್ವರ ಭಟ್, ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಮೀನಾರಾಯಣ ಕೆ.ಎಸ್.,
ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ರೀನಿಧಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ವನಿತಾ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಹಿತ ಕಾರ್ಯಕ್ರಮ
ನಿರೂಪಿಸಿದರು. ಕಾರ್ಯದರ್ಶಿ ಪ್ರಾರ್ಥನಾ ಧನ್ಯವಾದ ಸಮರ್ಪಿಸಿದರು.






















































