“ನಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಹಾಗೂ ಒಳ್ಳೆಯ ಸಂಸ್ಕಾರ ನೀಡಬೇಕು”: ರವೀಂದ್ರ ಶೆಟ್ಟಿ

ಕಾರ್ಕಳ : ಬಜಗೋಳಿಯ ಉದ್ಯಮಿಯಾಗಿರುವ ಹಾಗೂ ಕರ್ನಾಟಕ ರಾಜ್ಯ ಕ್ರಷರ್ ಗಣಿಗಾರಿಕೆ ಮಾಲಕರ ಸಂಘದ ಅಧ್ಯಕ್ಷರೂ ಆಗಿರುವ ಡಾ.ರವೀಂದ್ರ ಶೆಟ್ಟಿ ಇವರು ಮಾತನಾಡುತ್ತಾ, ಹಿಂದೂಗಳು ಜಾತಿಯ ಹೆಸರಿನಲ್ಲಿ ವಿಂಗಡಣೆ ಆಗದೇ ಹಿಂದೂ ಧರ್ಮೀಯರು ಎಂದು ಒಟ್ಟಾಗಬೇಕಾಗಿದೆ. ನಮ್ಮ ಪ್ರತಿಯೊಬ್ಬ ಹಿಂದೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಅಗತ್ಯ ಇಂದು ತುಂಬಾ ಇದೆ. ಇಂದಿನ ಯುವ ಪೀಳಿಗೆಯಲ್ಲಿ ರಾಷ್ಟ್ರೀಯತೆ ಮತ್ತು ಧಾರ್ಮಿಕತೆಯನ್ನು ಹೆಚ್ಚಿಸುವುದು ತುಂಬಾ ಮುಖ್ಯ. ಈ ದಿಸೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನ ತುಂಬಾ ಶ್ಲಾಘನೀಯ ಎಂದರು.
“ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು.” – ಸೌ. ಆಶ್ವಿನಿ ನಾಯಕ್
ಸನಾತನ ಸಂಸ್ಥೆಯ ಸೌ. ಆಶ್ವಿನಿ ನಾಯಕ್ ಇವರು ಮಾತನಾಡುತ್ತಾ, ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೆಯೋ, ಅಲ್ಲಿ ಜಯವಿರುತ್ತದೆ. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ; ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ. ನಮ್ಮ ಪ್ರತಿಯೊಂದು ಹಬ್ಬ, ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕವಾದ ಧರ್ಮಶಾಸ್ತ್ರ ಅಡಗಿದೆ. ಈ ಶಾಸ್ತ್ರಗಳನ್ನು ಅರಿತು, ಶ್ರದ್ಧೆಯಿಂದ ಆಚರಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಮತ್ತು ಬೆಳಗಲು ಸಾಧ್ಯ. ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ; ಆದ್ದರಿಂದ ಸಂಪ್ರದಾಯದ ಹಿಂದಿನ ಸತ್ಯವನ್ನು ತಿಳಿಯೋಣ, ಕರ್ಮನಿಷ್ಠ ಹಿಂದೂಗಳಾಗೋಣ. ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣೆಯಿಂದ ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳೂಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.
“ಜಗತ್ತಿನ ಕಲ್ಯಾಣಕ್ಕಾಗಿ ‘ಹಿಂದೂ ರಾಷ್ಟ್ರ’ವೇ ಏಕೈಕ ಪರಿಹಾರ” – . ಚಂದ್ರ ಮೊಗೇರ
ಲವ್ ಜಿಹಾದ್, ಮತಾಂತರ, ದ್ವೇಷ ಭಾಷಣ ಕಾಯ್ದೆ, ಹಿಂದೂಗಳ ಬಂಧನ, ಜನಸಂಖ್ಯಾ ಸ್ಫೋಟ ಮತ್ತು ವಕ್ಫ್ ಕಾಯ್ದೆಯಂತಹ ಗಂಭೀರ ಸವಾಲುಗಳನ್ನು ಎದುರಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಅಯೋಧ್ಯೆಯ ರಾಮ ಮಂದಿರದಂತೆ ಹಿಂದೂ ರಾಷ್ಟ್ರದ ಉದಯವೂ ಕೂಡಾ ನಿಶ್ಚಿತವಾಗಿದೆ. ದೇವಸ್ಥಾನಗಳ ಸರ್ಕಾರೀಕರಣವನ್ನು ಕೊನೆಗಾಣಿಸಿ ಸಾತ್ವಿಕ ಸಮಾಜ ನಿರ್ಮಿಸಲು ರಾಮರಾಜ್ಯದ ಮಾದರಿಯೇ ನಮಗೆ ಬೇಕು. “ಹಿಂದೂಗಳು ಜಾತಿ-ಪಂಥ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಕ್ಕೆ ಸೀಮಿತವಾಗದೆ, ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರದ ನಿರ್ಮಾಣ ಯಜ್ಞದಲ್ಲಿ ಕೈಜೋಡಿಸಿ,” ಎಂದು ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಕರೆ ನೀಡಿದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಜಗೋಳಿಯ ದಿಡಿಂಬಿರಿಯಲ್ಲಿನ ಗಣಪತಿ ಸಭಾ ಭವನದಲ್ಲಿ ಆದಿತ್ಯವಾರದಂದು ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ, ಶಂಖನಾದ ಮತ್ತು ವೇದಮಂತ್ರ ಘೋಷದಿಂದ ಪ್ರಾರಂಭಿಸಲಾಯಿತು. ಕಾರ್ಯಕರ್ಮದ ನಿರೂಪಣೆಯನ್ನು ಸೌ. ಚೇತನಾ ಪ್ರಭು ಇವರು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಶ್ವನಾಥ ನಾಯಕ್ ಇವರು ಸಮಿತಿಯ ಕಾರ್ಯ ಪರಿಚಯ ಮತ್ತು ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 300 ಹಿಂದೂ ಬಾಂಧವರು ಪಾಲ್ಗೊಂಡರು.






