
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆ ನಡೆಸುವುದನ್ನು ಕೈಬಿಡಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಕಟಿಸಿದ ಕೆಲವು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿ ಕಳೆದ ವರ್ಷದಂತೆ ಈ ವರ್ಷವೂ SSLC-PUC ಗೆ ಮೂರು ಪರೀಕ್ಷೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಇದೀಗ ಪರೀಕ್ಷಾ ವಿಧಾನದಲ್ಲಿಯೂ ಮಾರ್ಪಾಡು ಮಾಡಿದೆ ಎಂದು ಹಲವು ಮಾಧ್ಯಮಗಳು ಸುಳ್ಳು ಸುದ್ದಿ ವರದಿ ಮಾಡಿದ್ದವು. ಈ ಸುಳ್ಳು ಸುದ್ದಿಯಿಂದ ಕೋಪಗೊಂಡ ಸಚಿವ ಮಧು ಬಂಗಾರಪ್ಪ, ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಇಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಬೇಡ. ಈ ವರ್ಷವೂ ಮೂರು ಎಕ್ಸ್ಂ ಮಾಡಲ್ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ.
ಮೂರು ಪರೀಕ್ಷೆಗಳ ವಿಚಾರದಲ್ಲಿ ಕೆಲವರು ಗೊಂದಲ ಯಾಕೆ ಸೃಷ್ಟಿಸುತ್ತಿದ್ದಾರೆಂದು ತಿಳಿಯುತ್ತಿಲ್ಲ. ಅವರಿಗೆ ತಿಳವಳಿಕೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಯಾವುದೇ ಪರೀಕ್ಷೆಯ ವಿಧಾನದ ಬದಲಾವಣೆಯನ್ನು ನಮ್ಮ ಇಲಾಖೆಯಿಂದ ಹೊರಡಿಸಬೇಕು. ಮೂರು ಎಕ್ಸಾಂ ಮಾಡಲ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಾರೋ ಹೇಳಿದರು ಎಂದು ಸುದ್ದಿ ಮಾಡಬೇಡಿ. ಬದಲಾವಣೆ ಇದ್ದರೆ ಚರ್ಚೆ ಮಾಡಬೇಕಾಗುತ್ತದೆ. ಚರ್ಚೆ ಮಾಡಿಯೇ ಬದಲಾವಣೆ ಮಾಡುತ್ತೇವೆ. ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.





