
ಕಾರ್ಕಳ : ಎಲ್ಲ ಉಪನಿಷತ್ತುಗಳ ಸಾರವನ್ನು ಹೊಂದಿರುವ ಛಾಂದೋಗ್ಯ ಉಪನಿಷತ್ತು ಮೋಕ್ಷದೆಡೆಗೆ ಸಾಗಲು ಪೂರಕವಾಗುವ ವಿವಿಧ ಉಪಾಸನಾ ವಿಧಿಗಳನ್ನು ತಿಳಿಸಿ ಕೊಡುತ್ತದೆ ಎಂಬುದಾಗಿ ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರಾಹುಲ್ ರಾಜಶೇಖರ ಭಟ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ಅಕ್ಟೋಬರ್ ೨೬ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಛಾಂದೋಗ್ಯ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದರು.
ಉಪಾಸನೆ ಮತ್ತು ನಿಷ್ಕಾಮ ಕರ್ಮದಿಂದ ಮನಸ್ಸಿನ ಏಕಾಗ್ರತೆ ಮತ್ತು ಚಿತ್ತಶುದ್ಧಿಯನ್ನು ಹೊಂದಿ ಮೋಕ್ಷವನ್ನು ಹೊಂದುವ ಬಗೆಯನ್ನು ಛಾಂದೋಗ್ಯ ಉಪನಿಷತ್ತು ವಿವರಿಸುತ್ತದೆ. ಮೋಕ್ಷಾಪೇಕ್ಷಿಗಳಿಗೆ ಇದು ಉತ್ತಮ ಮಾರ್ಗದರ್ಶಿಯಾಗಿದೆ ಎಂದರು.
ಅ.ಭಾ.ಸಾ.ಪ.ದ. ಗೌರವಾಧ್ಯಕ್ಷರಾದ ನಿತ್ಯಾನಂದ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಕು. ಶಾರ್ವರಿಯವರು ಪ್ರಾರ್ಥಿಸಿ, ಜಯಶ್ರೀ ಆದಿರಾಜ ಅಜ್ರಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರ್ವಹಿಸಿದರು. ಸುಲೋಚನಾ ಬಿ.ವಿ. ಸ್ವಾಗತಿಸಿ, ಮಿತ್ರಪ್ರಭಾ ಹೆಗ್ಡೆ ವಂದಿಸಿದರು.
.







