ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಮೃತ ಬಾಲಕನ ಪೋಷಕರು

ಉಡುಪಿ: ಉಡುಪಿಯ ಪೆರ್ಡೂರು ಸಮೀಪ ಕಣ್ಮರೆಯಾಗಿದ್ದ ಬಾಲಕನೊಬ್ಬ ನದಿ ಬದಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಸಂಶಯಗಳನ್ನು ಮೂಡಿಸಿದ್ದು ಈತನ ಜೊತೆಗೆ ಈಜಲು ಹೋದ ಸಂಬಂಧಿ ಯುವಕನ ಬಗ್ಗೆ ಮೃತ ಬಾಲಕನ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ.
10ನೇ ತರಗತಿಯ ಹಿರಿಯಡ್ಕ ಪ್ರೌಢಶಾಲೆಯ ಶ್ರೀಶಾನ್ ಶೆಟ್ಟಿ ನ.9 ರಂದು ಅಜ್ಜಿಯ ಮನೆಯಿಂದ ಕಾಣೆಯಾಗಿದ್ದು ನ.10 ಕ್ಕೆ ಬಾಲಕನ ಶವ ಸಮೀಪದ ಮಡಿಸಾಲು ಹೊಳೆಯ ತೀರ ಪ್ರದೇಶದಲ್ಲಿ ಪತ್ತೆಯಾಗಿದೆ. ಈತನ ಜೊತೆಗಿದ್ದ ಯುವಕ ನವೀನ್ ಈ ಸಾವಿನ ವಿಚಾರವನ್ನು ಮುಚ್ಚಿಟ್ಟಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿದೆ.
ಶ್ರೀಶಾನ್ ಶೆಟ್ಟಿ ಸಂಬಂಧಿ ಯುವಕ ನವೀನ್ ಎಂಬಾತನ ಒತ್ತಾಯದ ಮೇರೆಗೆ, ಮಡಿಸಾಲು ಹೊಳೆಯಲ್ಲಿ ಈಜಲು ಹೋಗಿ ಕಾಣೆಯಾಗಿದ್ದ. ತಂದೆ-ತಾಯಿ ಊರ ಹುಡುಗರ ನೆರವು ಪಡೆದು ಎಲ್ಲಾ ಕಡೆ ಹುಡುಕಾಡಿದರೂ ಮಗ ಎಲ್ಲೂ ಪತ್ತೆಯಾಗದೆ ಕಾರಣ ಹಿರಿಯಡ್ಕ ಠಾಣೆಗೆ ದೂರು ಕೊಟ್ಟರು. ಮರುದಿನ ಈಜಲು ಹೋಗಿದ್ದ ನದಿ ತೀರದಲ್ಲೇ ಶ್ರೀಶಾನ್ನ ಶವ ಪತ್ತೆಯಾಗಿದೆ.
ಇತ್ತ ನವೀನ್ ಶ್ರೀಶಾನ್ ಈಜಲು ಹೋದ ನಂತರ ತಾನು ವಾಪಸು ಬಂದಿದ್ದೆ ಎಂದು ಸುಳ್ಳು ಹೇಳಿದ್ದ. ಶ್ರೀಶಾನ್ ತೆಗೆದುಕೊಂಡು ಹೋಗಿದ್ದ ದ್ವಿಚಕ್ರವಾಹನವನ್ನು ನದಿ ಬದಿಯ ನಿರ್ಜನ ಪ್ರದೇಶದಲ್ಲಿ ಅಡಗಿಸಿಟ್ಟು, ನಂತರ ಮರುದಿನ ತನ್ನ ಮನೆಯವರ ನೆರವಿನೊಂದಿಗೆ ಪ್ರತ್ಯೇಕ ಸ್ಥಳದಲ್ಲಿ ಹೂತು ಹಾಕಿದ್ದ. ಶವ ಪತ್ತೆಯಾಗುತ್ತಿದ್ದಂತೆ ನವೀನನ ಈ ಕೃತ್ಯ ಬೆಳಕಿಗೆ ಬಂದಿದ್ದು ಗಾಬರಿಯಿಂದ ನಾನು ಹೀಗೆ ಮಾಡಿದ್ದೆ ಎಂದು ಆತ ತಪ್ಪು ಒಪ್ಪಿಕೊಂಡಿದ್ದಾನೆ. ಇದೊಂದು ಕೊಲೆ ಪ್ರಕರಣ ಎಂದು ಮನೆಯವರಿಗೆ ಸಂಶಯವಿದ್ದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸತ್ಯಾಸತ್ಯತೆ ತಿಳಿದು ಬರಬೇಕಿದೆ.






