ಇನ್ನುಳಿದ 9 ದಿನಗಳಲ್ಲಿ 1.75 ಕೋಟಿ ಕುಟುಂಬದ ಗಣತಿ ಸವಾಲು

ಬೆಂಗಳೂರು: ಕಳೆದ ಒಂದು ವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡಿದ್ದು ಆದರೆ ಈವರೆಗೆ ಕೇವಲ 13% ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ ಎಂದು ವರದಿಯಾಗಿದೆ. ಇನ್ನುಳಿದ 9 ದಿನಗಳಲ್ಲಿ ಇನ್ನು 1.75 ಕೋಟಿ ಕುಟುಂಬಗಳ ದತ್ತಾಂಶ ಸಂಗ್ರಹ ನಡೆಸುವುದು ಸವಾಲಾಗಿದೆ.
ಸೆ.22 ರಿಂದ 28 ರ ವರೆಗೆ 26 ಲಕ್ಷ ಮನೆಗಳನ್ನು ಸಮೀಕ್ಷೆಗೊಳಪಡಿಸಲು ಸಾಧ್ಯವಾಗಿದ್ದು ಸುಮಾರು 90 ಲಕ್ಷ ಜನರ ಮಾಹಿತಿ ಸಂಗ್ರಹವಾಗಿದೆ. ಇನ್ನೂ ಆರು ಕೋಟಿ ಜನರ ದತ್ತಾಂಶಗಳ ಸಂಗ್ರಹ ಬಾಕಿಯಿದ್ದು ಇನ್ನುಳಿದ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದರಲ್ಲಿ ಅನುಮಾನ ವ್ಯಕ್ತವಾಗಿದೆ.
ಮೊದಲ ಮೂರು ನಾಲ್ಕು ದಿನಗಳು ಸಮೀಕ್ಷಾ ಆಪ್ ಲಾಗಿನ್, ಸರ್ವರ್, ನೆಟ್ವರ್ಕ್ ಸಮಸ್ಯೆಗಳಿಂದ ನಿಧಾನಗತಿಯಲ್ಲಿ ಗಣತಿ ನಡೆದಿದ್ದು ಈಗಲೂ ಅಲ್ಲಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆದರೂ ಆರಂಭದಲ್ಲಿ ಇದ್ದಷ್ಟು ಸಮಸ್ಯೆ ಇಲ್ಲವಾದ್ದರಿಂದ ಅಲ್ಲದೆ ಉಳಿದ ಅವಧಿ ಕೂಡ ಕಡಿಮೆ ಇರುವುದರಿಂದ ಗಣತಿದಾರರು ಆದಷ್ಟು ಶೀಘ್ರವಾಗಿ ದತ್ತಾಂಶ ಸಂಗ್ರಹಿಸುತ್ತಿರುವುದು ಕಂಡುಬಂದಿದೆ.
ಆನ್ಲೈನ್ ಮೂಲಕ ಸ್ವಯಂ ಮಾಹಿತಿಗೆ ಅವಕಾಶ ಕಲ್ಪಿಸಲಾಗಿದ್ದು http://kscbselfdeclaration.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ ಆಧಾರ್ ಅಥವಾ ರೇಷನ್ ಕಾರ್ಡ್ ನಂಬರ್ ಮೂಲಕ ಲಾಗಿನ್ ಆಗಬೇಕು. ಬಳಿಕ ಮೊಬೈಲ್ ಗೆ ಬಂದ ಓಟಿಪಿ ನಂಬರನ್ನು ಬಳಸಿ ಹೊಸ ಸಮೀಕ್ಷೆ ಕ್ಲಿಕ್ ಮಾಡಿಕೊಂಡು ಸುಲಭವಾಗಿ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ.






















































