
ಬೆಂಗಳೂರು: ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಕ್ಷೇತ್ರ ಚಿತ್ತಪುರದಲ್ಲಿ ತಾಲೂಕು ಆಡಳಿತ ಆರ್ಎಸ್ಎಸ್ ಪಥ ಸಂಚಲನಕ್ಕೆ ಅನುಮತಿ ನೀಡದ್ದಕ್ಕೆ ಸುದಿಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಆದರೆ ಇಂದು ಪಥ ಸಂಚಲನ ಮಾಡುವಂತಿಲ್ಲ ಮಾಡಲೂಬಾರದು ಎಂದು ಕೋರ್ಟ್ ಪ್ರಕಾರ ಹೇಳಿದಂತಾಯ್ತು. ಭೀಮ್ ಆರ್ಮಿ, ದಲಿತ ಪ್ಯಾಂಥರ್ಗೆ ಪಥಸಂಚಲನಕ್ಕೆ ಹಕ್ಕಿದೆ, ಆರ್ಎಸ್ಎಸ್ಗೂ, ಕಾಂಗ್ರೆಸ್ಗೆ ಹಕ್ಕು ಇದೆ. ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ. ಮತ್ತೊಮ್ಮೆ ಅರ್ಜಿ ಕೊಡಲಿ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಆರ್ಎಸ್ಎಸ್ ಕಲಬುರಗಿ ಜಿಲ್ಲೆಯಲ್ಲಿ ಪಥಸಂಚಲನ ಮಾಡುತ್ತೇವೆ ಎಂದು ಹೇಳಿತ್ತು. ಸರ್ಕಾರಿ ಜಾಗಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧಿಸುವಂತೆ ಪತ್ರ ಬರೆದಿದ್ದಕ್ಕೆ ಉದ್ದೇಶಪೂರ್ವಕವಾಗಿ ನನ್ನ ಮತ ಕ್ಷೇತ್ರದಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ ಆದಮೇಲೆ ನನಗೆ ಬುದ್ದಿ ಕಲಿಸಬೇಕೆಂದು ಚಿತ್ತಾಪುರದಲ್ಲಿ ಪಥಸಂಚಲನದ ಪ್ಲ್ಯಾನ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.











