
ಬೆಂಗಳೂರು: ರಾಜ್ಯದ ಖಾದಿ ಬಟ್ಟೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದರಂತೆ, ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಕಡ್ಡಾಯವಾಗಿ ಖಾದಿ ಉಡುಪು ಧರಿಸಿ ಕಚೇರಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಈ ನಿಯಮವು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಮಂಡಳಿಗಳು, ನಿಗಮಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೂ ಅನ್ವಯವಾಗಲಿದೆ.
ದೇಶೀಯವಾಗಿ ತಯಾರಿಸಲ್ಪಡುವ ಖಾದಿ ಉತ್ಪನ್ನಗಳಿಗೆ ಪ್ರಾಮುಖ್ಯತೆ ನೀಡುವುದು ಹಾಗೂ ಖಾದಿ–ಗ್ರಾಮೋದ್ಯೋಗ ವಲಯವನ್ನು ಆರ್ಥಿಕವಾಗಿ ಬಲಪಡಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದ್ದು ಈ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಖರೀದಿಯನ್ನು ಸುಲಭಗೊಳಿಸಲು ಸರ್ಕಾರಿ ಖಾದಿ ಮಳಿಗೆಗಳಲ್ಲಿ ಈಗಿರುವ ರಿಯಾಯಿತಿಗೆ ಹೆಚ್ಚುವರಿಯಾಗಿ 5 ಶೇಕಡಾ ವಿಶೇಷ ರಿಯಾಯಿತಿ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಯನ್ನು 2026ರ ಏಪ್ರಿಲ್ 21ರಂದು, ಸರ್ಕಾರಿ ನೌಕರರ ದಿನಾಚರಣೆಯಂದು ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ.
ಇದಲ್ಲದೆ, ರಕ್ಷಣಾ ಇಲಾಖೆಯ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ MSIL ಮೂಲಕ ಕ್ಯಾಂಟೀನ್ ಸ್ಥಾಪಿಸುವ ಪ್ರಸ್ತಾವನೆ ಬಜೆಟ್ನಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ರೇಷ್ಮೆ ಸೀರೆ ಹಾಗೂ ಬಟ್ಟೆಗಳ ಖರೀದಿಗೆ ವಿಶೇಷ ರಿಯಾಯಿತಿ ವಿಸ್ತರಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಹೊಸ ನಿಯಮದಂತೆ, ಪುರುಷ ಸರ್ಕಾರಿ ನೌಕರರು ಖಾದಿ ಶರ್ಟ್, ಪ್ಯಾಂಟ್, ಓವರ್ಕೋಟ್ ಸೇರಿದಂತೆ ಔಪಚಾರಿಕ ಉಡುಪುಗಳನ್ನು ಧರಿಸಬಹುದಾಗಿದ್ದು, ಮಹಿಳಾ ನೌಕರರು ಖಾದಿ ರೇಷ್ಮೆ ಸೀರೆ, ಚೂಡಿದಾರ್ ಹಾಗೂ ಇತರೆ ಔಪಚಾರಿಕ ಉಡುಪುಗಳನ್ನು ಬಳಸಿಕೊಳ್ಳಬಹುದು. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ನೇಕಾರರು ಮತ್ತು ಖಾದಿ ಉದ್ಯಮಕ್ಕೆ ಮಹತ್ವದ ಬೆಂಬಲ ದೊರಕಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



















