
ನವದೆಹಲಿ: ದೇಶದ ಆರ್ಥಿಕ ದಿಕ್ಕು, ಅಭಿವೃದ್ಧಿ ಆದ್ಯತೆಗಳು ಹಾಗೂ ಸರ್ಕಾರದ ಭವಿಷ್ಯ ಯೋಜನೆಗಳನ್ನು ನಿರ್ಧರಿಸುವ ಬಜೆಟ್ ಮಂಡನೆ ಇಂದು ನಡೆಯಲಿದೆ.
ಸಾಮಾನ್ಯ ನಾಗರಿಕರಿಂದ ಹಿಡಿದು ಉದ್ಯಮ, ಕೃಷಿ, ಉದ್ಯೋಗ ಮತ್ತು ಹೂಡಿಕೆ ವಲಯಗಳವರೆಗೂ ಎಲ್ಲರ ಗಮನ ಸೆಳೆಯುವ ಕೇಂದ್ರ ಸರ್ಕಾರದ 2026–27ನೇ ಹಣಕಾಸು ವರ್ಷದ ಆಯವ್ಯಯವನ್ನು ಮಂಡಿಸಲು ಸಜ್ಜಾಗಿದೆ. ಪ್ರತಿವರ್ಷ ಫೆಬ್ರವರಿ 1ರಂದು ಬಜೆಟ್ ಮಂಡಿಸುವುದು ಸಂಪ್ರದಾಯವಾಗಿದ್ದು, ಈ ಬಾರಿ ಫೆ.1 ಭಾನುವಾರವಾದರೂ ಸಂಸತ್ತು ರಜೆ ದಿನದಲ್ಲೇ ಕಾರ್ಯನಿರ್ವಹಿಸುತ್ತಿದೆ. ದೇಶದ ಭವಿಷ್ಯದ ದಿಕ್ಕು ನಿರ್ಧರಿಸುವ ಈ ಬಜೆಟ್ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
2 ಅವಧಿಗೆ ವಿತ್ತಸಚಿವರಾಗಿದ್ದ ಮೊರಾರ್ಜಿ ದೇಸಾಯಿಯವರು(1958-63 ಮತ್ತು 67-69) ಅತಿ ಹೆಚ್ಚು(10) ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಪಡೆದಿದ್ದಾರೆ. ಇವರ ನಂತರದ ಸ್ಥಾನದಲ್ಲಿ 9 ಬಾರಿ ಈ ಕಾರ್ಯ ಮಾಡಿದ ಪಿ. ಚಿದಂಬರಂ ಅವರು ನಿಲ್ಲುತ್ತಾರೆ. ಹಾಲಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ 2026-27ರ ಬಜೆಟ್ ಮಂಡಿಸುವ ಮೂಲಕ ಅವರನ್ನು ಸರಿಗಟ್ಟಲಿದ್ದಾರೆ.



















