
ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ಗ್ರಾಮದ ಶೆಟ್ಟಿಬೆಟ್ಟು ದರ್ಖಾಸುವಿನ ದಿವಂಗತ ವಿಠಲ ಸಾಲ್ಯಾನ್ ಅವರು ದೈವನರ್ತನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಹೆಸರಾಂತ ಕಲಾವಿದರಾಗಿದ್ದರು. ಶ್ರೀ ತಮ್ಮ ಬಂಗೇರ–ಚಿಂದು ದಂಪತಿಯ ಪುತ್ರರಾಗಿದ್ದ ಅವರು ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ಕೇವಲ 17ನೇ ವಯಸ್ಸಿನಲ್ಲಿ ಕುಲಕಸುಬಾದ ಶ್ರೀ ದೈವದ ನರ್ತನ ಸೇವೆಯನ್ನು ಆರಂಭಿಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ 37 ಮುಗ್ಗೇರ್ಕಳಗಳಲ್ಲಿ ಹಲೇರಾ ಪಂಜುರ್ಲಿ ದೈವದ ನರ್ತನ ಹಾಗೂ 23 ಮುಗ್ಗೇರ್ಕಳಗಳಲ್ಲಿ ಮಹಾಂಕಾಳಿ ಕೋಲವನ್ನು ಯಶಸ್ವಿಯಾಗಿ ನಡೆಸಿ ಜನಮನ್ನಣೆ ಗಳಿಸಿದ್ದರು. ತೆಳ್ಳಾರ, ಕುಪ್ಪೆಟ್ಟು, ನಟ್ಟಿಲ್ಲ, ಸೆಮಿಕಲ್ಲ, ಮಿತ್ತೊಟ್ಟು, ಶೇರಿಗಾರ, ಮಟ್ಟಾರ ಪಂಜುರ್ಲಿ ಹಾಗೂ ಶಾಂತೇರಿ ಕಲ್ಲುರ್ಟಿ ಕೋಲಗಳಲ್ಲಿಯೂ ತಮ್ಮ ಅದ್ಭುತ ಕಲಾ ಪ್ರದರ್ಶನದ ಮೂಲಕ ಪ್ರಸಿದ್ಧಿ ಪಡೆದಿದ್ದರು.ಕಾಂತಾವರ ಗ್ರಾಮದ ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡ, ಕಂಬಳಾಭಿಮಾನಿ ಹಾಗೂ ಸಮಾಜಸೇವಕರಾಗಿದ್ದ ದಿವಂಗತ ಧರ್ಮಣ ಕೋಟ್ಯಾನ್ ಅವರ ಕಟ್ಟಾಭಿಮಾನಿಯಾಗಿದ್ದ ವಿಠಲ ಸಾಲ್ಯಾನ್ ಅವರು ನೆಲ್ಲಿಬೆಟ್ಟು ಮತ್ತು ಪಾಪುದಡ್ಕ ಶ್ರೀ ಬ್ರಹ್ಮ ಮುಗ್ಗೇರ್ಕಳಗಳಲ್ಲಿ ಹಲೇರಾ ಪಂಜುರ್ಲಿ ಕೋಲ ನಡೆಸಿ ವಿಶೇಷ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅಂಬಲಪದವು ಗೋಳಿಕಟ್ಟೆ ಶ್ರೀ ವ್ಯಾಘ್ರ ಚಾಮುಂಡಿ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳ ಕಾಲ ನಿರಂತರವಾಗಿ ದೈವನರ್ತನ ಸೇವೆ ಸಲ್ಲಿಸಿ ಭಕ್ತರ ಪ್ರೀತಿ ಗಳಿಸಿದ ಅವರು, ಬಳಿಕ ತಮ್ಮ ಪುತ್ರ ದಿವಂಗತ ರಾಜು ಸಾಲ್ಯಾನ್ ಅವರಿಗೆ ಈ ಸೇವೆಯ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದರು. ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಅವರ ಕೊಡುಗೆ ಅಮೂಲ್ಯವೆಂದು ಸ್ಥಳೀಯರು ಸ್ಮರಿಸುತ್ತಾರೆ.
ದೈವನರ್ತನದ ಮೂಲ ಸಂಪ್ರದಾಯ ಹಾಗೂ ಕಟ್ಟಲೆಗಳಿಗೆ ಬದ್ಧರಾಗಿದ್ದ ಅವರ ಸಾಧನೆಯನ್ನು ಗುರುತಿಸಿ 2001ರಲ್ಲಿ ಅಂದಿನ ಕಾರ್ಕಳ ಶಾಸಕ ದಿವಂಗತ ಗೋಪಾಲ್ ಭಂಡಾರಿ ಅವರು ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. ಅಲ್ಲದೆ, 12 ಫೆಬ್ರವರಿ 2013ರಂದು ಶ್ರೀ ವ್ಯಾಘ್ರ ಚಾಮುಂಡಿ ದೈವ ನೇಮದ ಸಂದರ್ಭದಲ್ಲಿ ಊರಿನ ಹತ್ತು ಸಮಸ್ತರ ವತಿಯಿಂದ ವಿಶೇಷ ಗೌರವ ಸನ್ಮಾನವೂ ಲಭಿಸಿತ್ತು.
2026ರ ಆಗಸ್ಟ್ 2ರಂದು ದೈವಾಧೀನರಾದ ವಿಠಲ ಸಾಲ್ಯಾನ್ ಅವರ ಆತ್ಮಕ್ಕೆ ಶ್ರೀ ಕಾಂತೇಶ್ವರ ಸ್ವಾಮಿ ಹಾಗೂ ಗೋಳಿಕಟ್ಟೆ ಶ್ರೀ ವ್ಯಾಘ್ರ ಚಾಮುಂಡಿ ಸದ್ಗತಿ ಕರುಣಿಸಲಿ ಎಂದು ಅಂಬಲಪದವು–ಗೋಳಿಕಟ್ಟೆ ಕಾಂತಾವರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಾರ್ಥಿಸಿದ್ದಾರೆ.

























































