
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಹೇಳಿಲ್ಲ, ನಾನು ಹೇಳುವುದಿಲ್ಲ ನಿಷೇಧಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ನಿಷೇಧ ಮಾಡುವ ಅಧಿಕಾರ ನಮಗಿಲ್ಲ, ಅದೇನಿದ್ದರೂ ಕೇಂದ್ರ ಸರ್ಕಾರದ ಅಧಿಕಾರ. ಆದರೆ ಅದು ಪ್ರಗತಿಪರ ಚಿಂತನೆ ಇಲ್ಲದ ಕೋಮುವಾದಿ ಸಿದ್ಧಾಂತ ಹೊಂದಿರುವ ರಾಜಕೀಯ ಸಂಘಟನೆ ಎಂದು ಆರೋಪಿಸಿರುವ ದಿನೇಶ್ ಗುಂಡೂರಾವ್ ನಮ್ಮ ದೇಶದಲ್ಲಿ ಅನೇಕ ಸಂಘ ಸಂಸ್ಥೆಗಳಿವೆ. ಎಲ್ಲವೂ ನೋಂದಣಿ ಮಾಡಿಸಿಕೊಂಡು ಅವುಗಳ ಕಾರ್ಯ ಚಟುವಟಿಕೆ ಮಾಡುತ್ತಿವೆ. ಆರ್ ಎಸ್ಎಸ್ ಗೆ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಇತಿಹಾಸ ಇದ್ದು ಎಂದಿಗೂ ಪ್ರಗತಿಪರ ಚಿಂತನೆಗೆ ಸಹಕಾರ ಕೊಟ್ಟಿಲ್ಲ. ಕೋಮುವಾದ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದು ಮಹಿಳಾ ವಿರೋಧಿ ನೀತಿಯನ್ನು ಬೆಂಬಲಿಸುತ್ತದೆ. ಚುನಾವಣೆ ಪ್ರಚಾರ ಸರ್ಕಾರ ರಚನೆ ಮಂತ್ರಿಮಂಡಲ ರಚನೆ ಎಲ್ಲದರಲ್ಲೂ ಭಾಗಿಯಾಗುತ್ತದೆ. ನಾವು ರಾಜಕೀಯದಲ್ಲಿ ಇದ್ದೇವೆ ಎಂದು ನೇರವಾಗಿ ಹೇಳಿಕೊಳ್ಳಲಿ ಎಂದು RSS ವಿರುದ್ಧ ಕಿಡಿಕಾರಿದ್ದಾರೆ.






















































