
ಬೆಂಗಳೂರು: ಸಾರಿಗೆ ಇಲಾಖೆಯು ಕೆಎಸ್ಆರ್ಟಿಸಿ ನೌಕರರಿಗೆ ಹೊಸ ವರ್ಷದ ಗಿಫ್ಟ್ ನೀಡಿದ್ದು ಅದೇನೆಂದರೆ 20 ವರ್ಷಗಳ ಬೇಡಿಕೆಯಾಗಿದ್ದ ನಗದು ರಹಿತ ಚಿಕಿತ್ಸಾ ಯೋಜನೆಗೆ ‘ಕೆಎಸ್ಆರ್ಟಿಸಿ ಆರೋಗ್ಯ’ ಇಂದು ಚಾಲನೆ ಸಿಕ್ಕಿದೆ.
ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಗೆ ಚಾಲನೆ ನೀಡಿದ್ದು ಈ ಯೋಜನೆ ಅಡಿ ನೌಕರನ ಕುಟುಂಬದಲ್ಲಿ ತಂದೆ-ತಾಯಿ, ಹೆಂಡತಿ ಮಕ್ಕಳು ಎಲ್ಲರಿಗೂ ಯಾವುದೇ ಕಾಯಿಲೆ ಮತ್ತು ಎಷ್ಟೇ ಖರ್ಚಾದರೂ ಈ ಯೋಜನೆ ಅಡಿ ಚಿಕಿತ್ಸೆ ಸಿಗಲಿದೆ. ನೌಕರರು ಪ್ರತಿ ತಿಂಗಳು 650ರಂತೆ ವಾರ್ಷಿಕ 8 ಸಾವಿರ ರೂ. ಪಾವತಿ ಮಾಡಬೇಕಿದ್ದು ಈ ಯೋಜನೆ ಅಡಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. 250 ಆಸ್ಪತ್ರೆಗಳು 24 ಡಯಾಗ್ನಸ್ಟಿಕ್ ಸೆಂಟರ್, 6 ಆಯುರ್ವೇದ ಆಸ್ಪತ್ರೆಗಳು ಈ ಯೋಜನೆ ಅಡಿ ಸರ್ಕಾರ ಎಮ್ಒಯು (MOU) ಮಾಡಿಕೊಂಡಿದೆ.
ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದೊಂದು ಒಳ್ಳೆ ಕಾರ್ಯಕ್ರಮ. ಬಹಳ ದಿನದಿಂದ ಇದರ ಬೇಡಿಕೆಯಿದ್ದು ಇಂದು ಜಾರಿ ಮಾಡಿದ್ದೇವೆ. ನೌಕರರು ಮತ್ತು ಅವರ ಕುಟುಂಬಗಳಿಗೂ ಉಪಯೋಗ ಆಗಲಿದೆ. ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಕಾರ್ಡ್ ತೋರಿಸಿದರೆ ಚಿಕಿತ್ಸೆ ಕೊಡುತ್ತಾರೆ ಎಂದು ತಿಳಿಸಿದರು.



















