
ಅಭಿನವ ಭಾರತ ಕಾರ್ಕಳವತಿಯಿಂದ ಕಾರ್ಕಳದಶಾಲಾ ಕಾಲೇಜುಗಳಲ್ಲಿ ಮತ್ತು ಕಾರ್ಕಳದಾದ್ಯಂತ ಪಸರಿಸಿರುವ ಗಾಂಜಾ, ಡ್ರಗ್ಸ್ ಮಾಫೀಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಕಾರ್ಕಳ ಪೊಲೀಸ್ ಉಪಧೀಕ್ಷಕರಿಗೆ ಅಭಿನವ ಭಾರತ ವತಿಯಿಂದ ಮನವಿ ನೀಡಲಾಯಿತು.
ನಮ್ಮ ದೇಶದ ಸುದೃಢ ಆಸ್ತಿಯೆಂದರೆ ಈ ದೇಶದ ಯುವ ಜನತೆ.ದೇಶವನ್ನು ಅಸ್ಥಿರಗೊಳಿಸಲು ದೇಶ ವಿರೋಧಿಗಳು ಮಾಡುವ ಷಡ್ಯಂತ್ರದ ಮೊದಲ ಭಾಗವೇ ಯುವ ಜನತೆಯ ದಾರಿ ತಪ್ಪಿಸಿ ಅವರನ್ನು ಮಾದಕ ವಸ್ತುಗಳ ದಾಸರನ್ನಾಗಿ ಮಾಡುವುದು.ದೇಶದ ಎಲ್ಲೆಡೆ ಇರುವ ಈ ಮಾದಕ ದ್ರವ್ಯಗಳ ಮಾಫಿಯಾ ಕರ್ನಾಟಕದ ಕರಾವಳಿ ಭಾಗದಲ್ಲಿ ಬೇರೂರಿ ಹಲವು ದಶಕಗಳೇ ಕಳೆದರೂ ಸಂಬಂಧ ಪಟ್ಟ ಇಲಾಖೆಗಳಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮ ಆಗಿಲ್ಲ.ಈ ಕಾರಣದಿಂದಾಗಿಯೇ ಈ ಡ್ರಗ್ಸ್ ಮಾಫಿಯಾ ಕಾರ್ಕಳ ಎಂಬ ಸುಶಿಕ್ಷಿತ ಸಭ್ಯ ತಾಲ್ಲೂಕಿನಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿ ದೇಶದ ಭವಿಷ್ಯದ ಸಶಕ್ತ ಪ್ರಜೆಗಳನ್ನು ನಿರ್ವೀಯರನ್ನಾಗಿಸಿ, ಅವರನ್ನು ದೇಶದ್ರೋಹಿ ಕೃತ್ಯಗಳಿಗೆ ಬಳಸಿಕೊಳ್ಳುವಂತಹ ಮಟ್ಟಕ್ಕೆ ಬೆಳೆದಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ.
ಅದೂ ಅಲ್ಲದೆ ಮುಗ್ಧ ಯುವತಿಯರಿಗೆ ಗಾಂಜಾ ಡ್ರಗ್ಸ್ ಇನ್ನಿತರ ಮಾದಕ ವಸ್ತುಗಳನ್ನು ಮೋಸದಿಂದ ಅಥವಾ ಬಲವಂತದಿಂದ ತಿನ್ನಿಸಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ, ಅವರ ಅಶ್ಲೀಲ ಚಿತ್ರಗಳನ್ನು ತೆಗೆದು ನಿರಂತರ ದೈಹಿಕ ಶೋಷಣೆ ಮಾಡುತ್ತಿರುವ ಹಲವಾರು ಘಟನೆಗಳು ನಡೆಯುತ್ತಿದ್ದು, ಮರ್ಯಾದೆಗೆ ಅಂಜಿ ಈ ಘಟನೆಗಳು ಎಲ್ಲೂ ಬೆಳಕಿಗೆ ಬರುತ್ತಿಲ್ಲ.ಮಾನ್ಯ ಪೋಲೀಸ್ ಅಧಿಕಾರಿಗಳಲ್ಲಿ ನಮ್ಮ ವಿನಂತಿ ಏನೆಂದರೆ,ಮಾದಕ ದ್ರವ್ಯ ಮಾರಾಟ ಸಾಗಾಟ, ಸೇವನೆಯ ವಿರುದ್ದ ತುರ್ತು ಕ್ರಮ ಕೈಗೊಳ್ಳಲು ಇರುವ ಪ್ರತ್ಯೇಕ ವಿಜಿಲೆನ್ಸ್ ಘಟಕವನ್ನು ಸಕ್ರೀಯ ಗೊಳಿಸುವುದು,ಮಾದಕ ದ್ರವ್ಯದ ಬಗ್ಗೆ ದೂರು ನೀಡಲು ಟೋಲ್ ಫ್ರೀ ನಂಬರ್ ನೀಡುವುದು ,ಪ್ರತಿ ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ದೂರು, ಮಾಹಿತಿ ನೀಡಲು ದೂರು ಪೆಟ್ಟಿಗೆ ಸ್ಥಾಪಿಸುವುದು, ಹಳೆಯ ಡ್ರಗ್ಸ್ ಪೆಡ್ಲರ್ ಗಳನ್ನು ಪ್ರತಿ ತಿಂಗಳು ಕರೆಯಿಸಿ ಪೆರೇಡ್ ನಡೆಸುವುದು.ಕಾರ್ಕಳ ಸೇರಿ ಉಡುಪಿ ಜಿಲ್ಲೆಯಾದ್ಯಂತ ಇರುವ ಡ್ರಗ್ಸ್ ಮಾಫಿಯಾದ ವಿರುದ್ಧ ಅತಿ ಶೀಘ್ರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯ ಜನತೆ ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ದೇಶದ ಯುವ ಜನತೆ ಸುಶಿಕ್ಷಿತ ಸಭ್ಯ ನಾಗರೀಕರಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕೆಂದುಮನವಿ ನೀಡಲಾಯಿತು













