ಭಾಗ 645
ಭರತೇಶ್ ಶೆಟ್ಟಿ ಎಕ್ಕಾರು

ಅಷ್ಟರವರೆಗೆ ರಾಜಾ ಸೌದಾಸನ ಮಡದಿ ಮದಯಂತಿ ಸುಮ್ಮನಿದ್ದು ಪುರುಷ ವ್ಯವಹಾರದಲ್ಲಿ ಭಾಗವಾಗಿರಲಿಲ್ಲ. ಯಾವಾಗ ಶಾಪಗಳು ವಿನಿಮಯವಾಗುವ ಘಟ್ಟ ತಲುಪಿತೋ ಆ ಕ್ಷಣ ಪ್ರೇಕ್ಷಕಳಾಗಿ ಉಳಿಯದೆ ಓಡಿಬಂದು ಶಾಪ ನೀಡಲು ಮುಂದಾಗಿ ಕೈಯಲ್ಲಿ ಜಲಧಾರಣೆ ಮಾಡಿರುವ ಪತಿಯ ಬಳಿಗೆ ಬಂದವಳೇ ಗಂಡನಿಗೆದುರಾಗಿ ನಿಂತು ಕರ ಜೋಡಿಸಿ ಕಣ್ಣೀರ್ಗರೆಯುತ್ತಾ ಬೇಡಿಕೊಳ್ಳತೊಡಗಿದಳು. “ಸ್ವಾಮೀ! ನಾವು ಪುಣ್ಯಪ್ರದವಾದ ಮಹಾಯಾಗ ವಿರಚಿಸಲು ಹೊರಟವರು. ಪ್ರತಿಫಲವಾಗಿ ಲೋಕಕಲ್ಯಾಣವಾಗಲಿ ಎಂದು ಅಪೇಕ್ಷಿಸಿದವರಲ್ಲವೇ? ಆದರೆ ಇಲ್ಲೇನಾಗುತ್ತಿದೆ! ಯಾಗ ದೀಕ್ಷಿತರಾದ ನೀವೂ ದುಡುಕಿ ಪ್ರತಿಶಾಪ ನೀಡಲು ಮುಂದಾಗುವುದೇ? ಧರ್ಮಿಷ್ಟರಾದ ನಿಮಗೆ ಬುದ್ಧಿವಾದ ಹೇಳುವಷ್ಟು ಪ್ರಾಜ್ಞೆ ನಾನಲ್ಲ. ಆದರೆ ಒಂದು ವಿಚಾರವನ್ನು ನಿಮಗೆ ನೆನಪಿಸಲು ಬಯಸುತ್ತೇನೆ. ತಾಳುವಿಕೆಗಿಂತ ಶ್ರೇಷ್ಟ ತಪವಿಲ್ಲ. ದುಡುಕುತನಕ್ಕಿಂತ ದೊಡ್ಡ ತಾಪವಿಲ್ಲ. ನೀವೀಗ ಶಾಂತಚಿತ್ತರಾಗಿ, ಅರೆಕ್ಷಣ ವಿವೇಕಿಯಾಗಿ ಯೋಚಿಸಿ. ನೀವೇನಾದರು ಈಗ ನಿರ್ಣಯಿಸಿರುವ ಶಾಪವೇನೋ ನನಗೆ ತಿಳಿದಿಲ್ಲ. ಆದರೆ ದುಡುಕಿ ಗುರು ವಸಿಷ್ಟರನ್ನೇ ಶಪಿಸಿದಿರಿ ಎಂದಾದರೆ ಮುಂದೆ ಪರಿಣಾಮ ಏನಾದೀತು. ಗುರಿ ತೋರುವ ಗುರುವಾಗಿರುವ ಅವರು ಕ್ಷೇಮವಾಗಿದ್ದರೆ, ಅವರಿಂದಲೇ ಶಾಪಗ್ರಸ್ಥರಾಗಿರುವ ನಿಮ್ಮ ಶಾಪ ವಿಮೋಚನೆಯ ದಾರಿಯನ್ನು ತೋರಿಸಬಲ್ಲರು. ಯಾವುದಕ್ಕೂ ನಿಮಗೆ ಕೋಪ ಬಂದಿರುವ ಈ ಒಂದು ಕ್ಷಣವನ್ನು ಸೈರಿಸಿಕೊಳ್ಳಿ. ಧರ್ಮವೇನು, ಯಾವುದು ಒಳಿತು? ಎಂಬ ಸತ್ಯದ ಬಗ್ಗೆ ಯೋಚಿಸಿ ನಂತರ ನಿರ್ಣಯ ಕೈಗೊಳ್ಳಿ” ಎಂದು ಬಹಳ ವಿನಮ್ರವಾಗಿ ಬೇಡಿಕೊಂಡಳು. ಧರ್ಮಪತ್ನಿಯಾದ ಮದಯಂತಿ ಸದಾ ಪತಿಯ ಶ್ರೇಯಸ್ಸನ್ನೇ ಬಯಸುವವಳು ಎಂದು ತಿಳಿದಿದ್ದ ಸೌದಾಸ ತನ್ನ ಪ್ರಿಯ ವಲ್ಲಭೆಯ ಮಾತಿನಿಂದ ಮನಪರಿವರ್ತನೆ ಹೊಂದಿ ಶಾಂತನಾದನು.
ಮಹಾರಾಣಿ ಮದಯಂತಿ ಮಹಾರಾಜ ಸೌದಾಸನ ಮುಖದಲ್ಲಿ ಮಡುಗಟ್ಟಿದ್ದ ಕ್ರೋಧ ಮಾಯವಾಗಿ ಯೋಚನೆಯ ಭಾವ ಮೂಡಿದಾಗ ತಿರುಗಿ ವಸಿಷ್ಟರ ಬಳಿಗೆ ಓಡಿ ಅವರ ಪಾದಮೂಲದಲ್ಲಿ ಆರ್ತೆಯೂ, ಶರಣಾಗತೆಯೂ ಆಗಿ ಬಿದ್ದು ಬೇಡಿಕೊಳ್ಳತೊಡಗಿದಳು “ಪೂಜ್ಯರೇ! ಹರ ಮುನಿದರೂ ಗುರು ಕಾಯುವನು. ಗುರುವೇ ಮುನಿದರೆ ಈ ಜಗದೊಳಗೆ ಯಾರೂ ಕಾಯುವವರಿಲ್ಲ ಎಂದು ಶಾಸ್ತ್ರವೇ ಹೇಳಿದುದನ್ನು ನೀವೂ ಬಲ್ಲವರೇ ಅಲ್ಲವೇ? ದೇವರೇ ಒಂದೊಮ್ಮೆಗೆ ಕೋಪಗೊಂಡರೂ ಒಂದೊಮ್ಮೆಗೆ ಸಮರ್ಥ ಗುರುವಿನ ಬುದ್ಧಿ ಹಾಗೂ ನಿರ್ದೇಶನದಂತೆ ನಡೆದು ಆ ಭಗವಂತನನ್ನೇ ಒಲಿಸಿಕೊಂಡು ಬದುಕುಳಿಯಬಹುದಂತೆ. ಈಗ ನಮಗೆ ದಾರಿ ತೋರಬೇಕಾದ ನೀವೇ ದಾರಿದ್ರ್ಯವನ್ನಿತ್ತರೆ ನಮ್ಮ ಗತಿಯೇನು ಗುರುವರ್ಯ? ಅರಿತೋ ಅರಿಯದೆಯೋ ನಮ್ಮಿಂದ ಏನಾದರು ಅಪರಾಧವಾಗಿದ್ದರೆ ಕ್ಷಮಿಸಿ ಬುದ್ಧಿ ಹೇಳಿ ಪೊರೆಯಬೇಕು. ಹಾಗಾಗದೆ ನೀವೇ ಶಪಿಸಿ ನಿಂತರೆ ನಮಗೆ ಉಳಿಗಾಲವಿದೆಯೇ? ಮಹಾತ್ಮರೇ ಈಗ ಆಗಿ ಹೋಗಿರುವ ಗಂಡಾಂತರದಿಂದ ನನ್ನ ಗಂಡನನ್ನು ನೀವೇ ಪಾರು ಮಾಡಬೇಕು” ಎಂದು ದುಃಖತಪ್ತಳಾಗಿ ಅಳುತ್ತಾ ಪ್ರಾರ್ಥಿಸಿದಳು.
ಮದಯಂತಿ ತನಗೆ ಶಾಪವೀಯಲು ಮುಂದಾದ ಅವಳ ಗಂಡನನ್ನು ಸಂತೈಸಿದ ಮಾತುಗಳು, ತನ್ನ ಪಾದಮೂಲಕ್ಕೆರಗಿ ಪ್ರಾರ್ಥಿಸಿ ಬೇಡಿದ ಬೇಡಿಕೆಗಳನ್ನು ಆಲಿಸಿದ ಗುರು ವಸಿಷ್ಟರು ಯೋಚಿಸತೊಡಗಿದರು. ಯಾಕೆ ಹೀಗಾಯಿತು? ಸೌದಾಸ ಅಪರಾಧಿಯಾಗಿದ್ದರೆ ಖಂಡಿತವಾಗಿಯೂ ಕ್ಷಮಾಪ್ರಾರ್ಥಿಯಾಗುತ್ತಿದ್ದ. ಆದರೆ ಹಾಗಾಗದೆ ನನಗೇ ಶಾಪ ನೀಡಲು ಮನ ಮಾಡಿದ್ದಾನೆ ಎಂದಾದರೆ ಆತ ನಿರಪರಾಧಿ. ಇಲ್ಲೇನೋ ನಡೆದಿದೆ ಎಂದು ದಿವ್ಯದೃಷ್ಟಿಯಿಂದ ನಡೆದ ಸತ್ಯ ಸಂಗತಿಗಳನ್ನು ಅರಿತುಕೊಂಡರು. ಎಂದೂ ಕೋಪಗೊಳ್ಳದ ತಾನು ದುಡುಕಿ ದುರಂತಕ್ಕೆ ಕಾರಣನಾದೆ ಎಂದು ಮರುಗಿದರು. ತೀವ್ರ ವ್ಯಥೆಗೊಳಗಾಗಿ ಈಗೇನು ಮಾಡುವುದು, ಶಪಿಸಿದ ಶಾಪಕ್ಕೆ ಪರಿಮಾರ್ಜನೆ ಹೇಗೆ ಎಂದು ತರ್ಕಿಸತೊಡಗಿದರು. ಇತ್ತ ಮಹಾರಾಜ ಸೌದಾಸನೂ ತಾನು ಅವಸರದಲ್ಲಿ ಅಪಾಯಕ್ಕೆ ಆಹ್ವಾನವೀಯುತ್ತಿದ್ದೆ. ಗುರುವಿಗೇ ಶಾಪ ನೀಡಲು ಮುಂದಾದ ಪಾಪಿಯಾಗಿ ಹೋದೆನೇ ಎಂದು ಕೊರಗಿದಾಗ ಆತ ಕೈಯಲ್ಲಿ ಹಿಡಿದಿದ್ದ ಶಾಪಾಗ್ನಿ ಅವಾಹಿಸಲ್ಪಟ್ಟ ಜಲ ಸಡಿಲವಾದ ಆತನ ಕೈಗಳಿಂದ ಜಾರಿ ತನ್ನದೇ ಪಾದದ ಮೇಲೆ ಬಿತ್ತು. ಸ್ವಭಾವತಃ ನೀರು ಬಿದ್ದಾಗ ತಂಪಾಗಿಸುವುದು ಅದರ ಗುಣ. ಆದರೆ ಈಗ ಬಿದ್ದಿರುವುದು ಶಾಪಾಗ್ನಿ ತುಂಬಿದ ಜಲವಲ್ಲವೇ, ಅದು ಇಳಿದು ಬಿದ್ದ ಸೌದಾಸನ ಪಾದ ಸುಟ್ಟು ಕರಟಿತು. ರಾಜ ಸೌದಾಸ ಕಲ್ಮಾಷಪಾದನಾದನು. ಇಷ್ಟಾಗುವಾಗ ಪರಿಹಾರ ಮಾರ್ಗ ಕಂಡುಕೊಂಡ ವಸಿಷ್ಟರು “ಹೇ ರಾಜಾ! ನೀನು ಧರ್ಮಿಷ್ಟನೂ ಸತ್ಯವಾದಿಯೂ ಆಗಿರುವೆ. ಕಾಲದ ಮಹಿಮೆಯೋ ಏನೋ ನರಮಾಂಸ ನಿನ್ನ ಕೈಯಾರೆ ನನಗೆ ಉಣಬಡಿಸುವಂತಾಗಿ ಹೋಯಿತು. ಇಲ್ಲಿ ನಿನ್ನ ಅಪರಾಧ ಇರದೇ ಹೋದರೂ ಅರಸನಾಗಿ ವಿವೇಚಿಸದೇ ಮುಂದುವರಿದ ಕಾರಣ ಬಲಿಪಶುವಾದೆ. ನನ್ನ ಬಾಯಿಯಿಂದ ತಪಸ್ಶಕ್ತಿಯ ಬಲ ಶಾಪವಾಗಿ ಹೊರಬಂದಿದೆ. ಅದು ಯಾವ ಕಾರಣದಿಂದಲೂ ಸುಳ್ಳಾಗದು. ಶಾಪವಾಕ್ಯದಂತೆ ನೀನು ನರಭಕ್ಷಕ ರಾಕ್ಷಸನಾಗಲೇ ಬೇಕು. ಆದರೆ ನಿರಪರಾಧಿಯಾದ ನಿನಗೆ ಶಿಕ್ಷೆಯಾಗಬಾರದಿತ್ತು. ಅದಕ್ಕಾಗಿ ಈಗ ವಿಶಾಪವೊಂದನ್ನೀಯುತ್ತೇನೆ. ಏನೆಂದರೆ ನಿನಗಿತ್ತಿರುವ ಶಾಪದ ಅವಧಿ ಕೇವಲ ಹನ್ನೆರಡು ವರ್ಷ ಕಾಲಕ್ಕೆ ಸೀಮಿತವಾಗಲಿ. ಆ ಬಳಿಕ ನೀನು ಶಾಪಮುಕ್ತನಾಗಿ ಪುನರಪಿ ಮೊದಲಿನಂತೆಯೇ ರಾಜಾ ಸೌದಾಸನಾಗು” ಎಂದು ತಿದ್ದುಪಡಿ ಮಾಡಿದರು.
ವಸಿಷ್ಟರ ಶಾಪದ ಪರಿಣಾಮವಾಗಿ ಸೂರ್ಯವಂಶದ ಕುಲದೀಪಕನಾದ ಮಹಾರಾಜ ಸೌದಾಸ ಕಲ್ಮಾಷಪಾದನಾಗಿ ರಾಕ್ಷಸನಾದನು. ಹೀಗೆ ವನದಲ್ಲಿ ನರಭಕ್ಷಕ ರಾಕ್ಷಸನಾಗಿ ತಿರುಗುವಾಗ ಈಗಾಗಲೇ ವಸಿಷ್ಟರ ವಿರುದ್ಧ ಪ್ರತಿಕಾರ ತೀರಿಸಲು ಶತಾಯಗತಾಯ ಯತ್ನಿಸುತ್ತಿದ್ದ ಕೌಶಿಕ ಎದುರಾದನು.
ಮುಂದುವರಿಯುವುದು…






























































































































