
ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಮಾಳ, 2025 -2026 ನೇ ಆರ್ಥಿಕ ಸಾಲಿನಲ್ಲಿ ರೂ 1.12 ಕೋಟಿ ನಿವ್ವಳ ಲಾಭ ಗಳಿಸಿ ಶೇ. 100% ಸಾಲ ವಸೂಲಾತಿ ಸಾಧನೆಯನ್ನು ಮಾಡಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ “ಸಾಧನಾ ಪ್ರಶಸ್ತಿ”ಯನ್ನು ಪಡೆದಿದೆ. ಒಟ್ಟು ಲಾಭದಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿಯವರು ಹೇಳಿದರು. ಅವರು ಬಜಗೋಳಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ಜರಗಿದ ಸಂಘದ 2025 -26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಘದ ಕಾರ್ಯಕ್ಷೇತ್ರದ ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಸಂಘದ ಪೂರ್ಣ ಪ್ರಮಾಣದ ಶಾಖೆಯನ್ನು ತೆರೆಯುವ ಯೋಜನೆ ಇದೆ ಎಂದು ಸಭೆಗೆ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ. ಸುವರ್ಣ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ ಮತ್ತು ಆರ್ಥಿಕ ತ:ಖ್ತೆಗಳನ್ನು ಸಭೆಯಲ್ಲಿ ಮಂಡಿಸಿ, ಸಂಘವು ರೂ. 70 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಕಳೆದ ಸಾಲಿಗಿಂತ ಠೇವಣಿಗಳಲ್ಲಿ ಶೇ. 22% ಹಾಗೂ ಸಾಲಗಳಲ್ಲಿ ಶೇ. 11.50% ಹೆಚ್ಚಳವಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತ ಸದಸ್ಯರಿಗೆ ರೂ 24.13 ಕೋಟಿ ಶೂನ್ಯ ಬಡ್ಡಿ ದರದ ಕೃಷಿ ಸಾಲ ವಿತರಿಸಲಾಗಿದ್ದು ಒಟ್ಟಾರೆ ರೂ 48.55 ಕೋಟಿ ಸದಸ್ಯರ ಸಾಲ ಹೊರಬಾಕಿ ಇದ್ದು, ಆರ್ಥಿಕ ವರ್ಷದಲ್ಲಿ ಆಡಿಟ್ ವರ್ಗೀಕರಣದಲ್ಲಿ “ಎ” ವರ್ಗ ಪಡೆದು ಸಾಧನೆ ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಎಸ್. ಎಸ್. ಎಲ್. ಸಿ. ಮತ್ತು ಪಿ.ಯು. ಸಿ. ಯಲ್ಲಿ ಶೇ. 90% ಕ್ಕಿಂತ ಅಧಿಕ ಅಂಕ ಗಳಿಸಿದ ಒಟ್ಟು 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಜಗೋಳಿ ಶಾಖೆಯಲ್ಲಿರುವ ಕ್ಯಾಂಪ್ಕೋ ಉಪಶಾಖೆಯ ಮುಖಾಂತರ ವರದಿ ವರ್ಷದಲ್ಲಿ ಅತೀ ಹೆಚ್ಚಿನ ಅಡಿಕೆ ಮಾರಾಟ ಮಾಡಿದ ಸಂಘದ ಸದಸ್ಯರುಗಳಾದ ಜಯಂತ ಜೋಶಿ ಎಂ., ಧನ ಕೀರ್ತಿ ಚೌಟ, ರಾಜವರ್ಮ ಇವರನ್ನು ಸನ್ಮಾನಿಸಲಾಯಿತು . ಸಿಬ್ಬಂದಿ ಕಿರಣ್ ಪೂಜಾರಿ ಸಾಧಕರ ವಿವರಗಳನ್ನು ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಸಂಘದ ಸದಸ್ಯರು ಸಂಘದ ಅಭಿವೃದ್ಧಿಯ ಬಗ್ಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು.ಸಂಘದ ಉಪಾಧ್ಯಕ್ಷರಾದ ನಾಗೇಶ್ ಭಂಡಾರಿ, ನಿರ್ದೇಶಕರುಗಳಾದ ಅನಿಲ್ ಎಸ್. ಪೂಜಾರಿ, ವೆಂಕಟೇಶ್ ಗೋರೆ. ಹೆಚ್., ಅಕ್ಷಯ್ ಕುಮಾರ್, ಸುಧಾಕರ್ ಡೋಂಗ್ರೆ, ಸುಮಿತ್ ಸಾಲಿಯಾನ್, ನಂದುಗೋಪನ್ ಕೆ. ಆರ್., ಶ್ರೀಮತಿ ಗೀತಾ ಎಸ್. ಪಾಟ್ಕರ್, ಶ್ರೀಮತಿ ಉಷಾ ಶೆಟ್ಟಿ , ರಾಜೇಶ್ವರ್ ನಾಯ್ಕ್, ಅಣ್ಣಿ ಪರವ, ವೃತ್ತಿಪರ ನಿರ್ದೇಶಕರಾದ ಜಯರಾಮ ಬಂಗೇರ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ. ಸುವರ್ಣ ಸಭಾ ಕಾರ್ಯಕ್ರಮ ನಿರೂಪಿಸಿದರು… ಪ್ರಭಾರ ಶಾಖಾ ವ್ಯವಸ್ಥಾಪಕರಾದ ಶ್ರೀ ದುಂಡಿರಾಜ್ ಜೋಶಿ ವಂದಿಸಿದರು…. ಸಂಘದ ಸಿಬ್ಬಂದಿ ವರ್ಗದವರು ಸಹಕರಿಸಿದರು.




































