
ತಿರುವನಂತಪುರಂ: ಮಹಿಳೆಯರು ಮನೆಯ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಬೇಕು, ಸಾರ್ವಜನಿಕ ವೇದಿಕೆಗಳಿಗೆ ಪ್ರವೇಶಿಸಬಾರದು ಎಂದು ಕೇರಳದ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿರುವ ಹೇಳಿಕೆ ಇದೀಗ ಕೇರಳದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.
ಮಹಿಳೆಯರನ್ನು ಚಿನ್ನಕ್ಕೆ ಹೋಲಿಸಿದ ಅವರು, ಚಿನ್ನದ ಆಭರಣವನ್ನು ಅಂಗಡಿಯಲ್ಲಿ ಸುರಕ್ಷಿತವಾಗಿ ಇಡುವಂತೆ ಮಹಿಳೆಯರೂ ಮನೆಯಲ್ಲೇ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕವಾಗಿ ಬಂದರೆ ಅವರ ಮೌಲ್ಯ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪವಿತ್ರ ಕುರಾನ್ ಮಹಿಳೆಯರು ಮನೆಯಲ್ಲೇ ಇರಬೇಕೆಂದು ಹೇಳುತ್ತದೆ. ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಕೂಡ ಕಳೆದ 100 ವರ್ಷಗಳಿಂದ ಇದೇ ವಿಚಾರವನ್ನು ಪ್ರತಿಪಾದಿಸುತ್ತಿದ್ದು, ಇದನ್ನು ಹೇಳುವುದು ತಮ್ಮ ಕರ್ತವ್ಯ ಎಂದು ಅಬೂಬಕರ್ ಅಹ್ಮದ್ ತಿಳಿಸಿದ್ದಾರೆ.
ಸಿಪಿಐ(ಎಂ), ಬಿಜೆಪಿ ಖಂಡನೆ.
ಧರ್ಮಗುರುವಿನ ಹೇಳಿಕೆಗೆ ಸಿಪಿಐ(ಎಂ) ನಾಯಕಿಯರಾದ ಪಿ.ಕೆ. ಶ್ರೀಮತಿ ಹಾಗೂ ಕೆ.ಕೆ. ಶೈಲಜಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ಮಧ್ಯಕಾಲೀನ ಊಳಿಗಮಾನ್ಯ ಮನಸ್ಥಿತಿಯಾಗಿದ್ದು, ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ..
ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಮಹಿಳೆಯರಿಗೆ ಸಂವಿಧಾನ ನೀಡಿರುವ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಯಾವುದೇ ಧರ್ಮಗುರುವಿನ ಆದೇಶದಿಂದ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ಗೆ ಸವಾಲು..
ಪುರುಷಾಧಿಪತ್ಯ ವ್ಯವಸ್ಥೆ ಕೊನೆಗಾಣಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಕೇರಳದಲ್ಲಿ ಅಲ್ಪಸಂಖ್ಯಾತರ ಬೆಂಬಲ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಪ್ರಮುಖವಾಗಿರುವುದರಿಂದ, ಈ ವಿಚಾರದಲ್ಲಿ ಕಾಂಗ್ರೆಸ್ ಯಾವ ನಿಲುವು ತಾಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹಿಂದೆಯೂ ವಿವಾದಾತ್ಮಕ ಹೇಳಿಕೆ
ಕಾಂತಪುರಂ ಅಬೂಬಕರ್ ಈ ಹಿಂದೆಯೂ ಲಿಂಗ ಸಮಾನತೆ ಇಸ್ಲಾಂಗೆ ವಿರುದ್ಧವಾಗಿದೆ ಹಾಗೂ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯರು ಬೀದಿಗಿಳಿಯಬಾರದು ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.
ಭಾರತೀಯ ಸಂವಿಧಾನದ 14 ಮತ್ತು 21ನೇ ವಿಧಿಗಳು ಮಹಿಳೆಯರಿಗೆ ಸಮಾನತೆ, ಸ್ವಾತಂತ್ರ್ಯ ಹಾಗೂ ಘನತೆಯಿಂದ ಬದುಕುವ ಹಕ್ಕುಗಳನ್ನು ಖಾತರಿಪಡಿಸುತ್ತವೆ. ಹೀಗಾಗಿ ಮಹಿಳೆಯರನ್ನು ಸಾರ್ವಜನಿಕ ಜೀವನದಿಂದ ದೂರವಿಡುವ ಇಂತಹ ಹೇಳಿಕೆಗಳು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಪ್ರಗತಿಪರರು ಆಕ್ಷೇಪಿಸಿದ್ದಾರೆ.






















































































