
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಮೂರು ವರ್ಷಗಳ ಸಂಭ್ರಮಾಚರಣೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಮಹಿಳೆಯರಿಗೆ ನೀಡಬೇಕಿರುವ ಬಾಕಿ ಹಣವನ್ನು ಮೊದಲು ಪಾವತಿಸುವಂತೆ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಕಾಂಗ್ರೆಸ್ ನಾಯಕರು ಮೂರು ವರ್ಷಗಳ ಹಿಂದೆ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ₹ 2,000 ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಯೋಜನೆಯ ಸಂಭ್ರಮ ಆಚರಿಸುವ ಮುನ್ನ ಬಾಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಸಿಎಜಿ ಪರಿಶೀಲನೆಯಲ್ಲಿ ₹ 225 ಕೋಟಿಗೂ ಹೆಚ್ಚು ಅಕ್ರಮ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. 2.88 ಲಕ್ಷ ಮೃತ ಫಲಾನುಭವಿಗಳ ಹೆಸರಿನಲ್ಲಿ ಹಣ ಪಾವತಿಯಾಗಿದ್ದು, ಮೃತರ ಖಾತೆಗಳಿಗೆ ₹ 115 ಕೋಟಿ ಜಮೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಖಾತೆ ಸಂಖ್ಯೆ ಇಲ್ಲದಿದ್ದರೂ 23,262 ಪಾವತಿಗಳ ಮೂಲಕ ₹ 46.52 ಕೋಟಿ ನೀಡಲಾಗಿದೆ ಹಾಗೂ ಒಂದೇ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಲಿಂಕ್ ಮಾಡಲಾಗಿದೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ ಸುಮಾರು ₹ 5,000 ಕೋಟಿ ಹಣವನ್ನು ಮಹಿಳೆಯರಿಗೆ ಪಾವತಿಸಿಲ್ಲ ಎಂಬ ಆರೋಪವನ್ನೂ ಮಾಡಿದ್ದಾರೆ.
“ಇದು ಗೃಹಲಕ್ಷ್ಮಿಯ ಯಶೋಗಾಥೆಯಲ್ಲ; ಕಾಂಗ್ರೆಸ್ ಸರ್ಕಾರದ ಅವ್ಯವಹಾರ, ಅಕ್ರಮ ಮತ್ತು ಲೂಟಿಯ ಯಶೋಗಾಥೆ” ಎಂದು ಅಶೋಕ್ ಟೀಕಿಸಿದ್ದಾರೆ. ಅಕ್ರಮ ಮುಚ್ಚಿಹಾಕಲು ಪರಿಷ್ಕರಣೆ ನೆಪದಲ್ಲಿ ಮಹಿಳೆಯರನ್ನು ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಚಾರಕ್ಕಾಗಿ ಜಾಹೀರಾತುಗಳಿಗೆ ಹಣ ಖರ್ಚು ಮಾಡುವ ಸರ್ಕಾರಕ್ಕೆ ಮಹಿಳೆಯರ ಖಾತೆಗೆ ₹ 2,000 ಜಮೆ ಮಾಡಲು ಹಣವಿಲ್ಲವೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಸಂಭ್ರಮಾಚರಣೆಯ ಬದಲು ಮಹಿಳೆಯರಿಗೆ ಸರ್ಕಾರ ಲೆಕ್ಕ ನೀಡಬೇಕು. 2025ರ ಫೆಬ್ರವರಿ ಮತ್ತು ಮಾರ್ಚ್ನ ಬಾಕಿ ಹಣವನ್ನು ತಕ್ಷಣ ಪಾವತಿಸುವುದು, ಸಿಎಜಿ ಉಲ್ಲೇಖಿಸಿರುವ ಅಕ್ರಮಗಳ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವುದು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಯರಿಗೆ ನೀಡಿದ ಭರವಸೆ ಈಡೇರಿಸದೆ ಇರುವುದು ಗ್ಯಾರಂಟಿಯಲ್ಲ, ನಂಬಿಕೆ ದ್ರೋಹ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನಡೆದಿರುವ ಅಕ್ರಮಗಳನ್ನು ರಾಜ್ಯದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.





















































































