
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಂದ “ಕೆಸರ್ ಡೊಂಜಿ ದಿನ ” ಕಾರ್ಯಕ್ರಮ ನೆರವೇರಿತು.
ಸಾಂತ್ರಬೆಟ್ಟು ಗುತ್ತುಮನೆಯ ಯಜಮಾನ ಫಣಿರಾಜ ಅವರ ಮನೆಯೆದುರಿನ ವಿಶಾಲ ಗದ್ದೆಯಲ್ಲಿ ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಕೆಸರಿನ ಗದ್ದೆಯಲ್ಲಿಳಿದು ಮಣ್ಣಿನ ಜೊತೆಗೆ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಂತ್ರಬೆಟ್ಟು ಗುತ್ತು ಮನೆಯ ಯಜಮಾನ ಪಣಿರಾಜ್ ಇವರು, ನಮ್ಮ ಊರಿನ ಗದ್ದೆಯಲ್ಲಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ನಮಗೆ ಅತ್ಯಂತ ಸಂತೋಷವಾಗಿದೆ. ಸುಮಾರು 500 ವರುಷಗಳಷ್ಟು ಹಳೆಯದಾದ ಈ ಸಾಂತ್ರಬೆಟ್ಟು ಮುಳಿಹುಲ್ಲಿನಿಂದ ಹಂಚಿನ ಮನೆಯಾಗಿ ಪರಿವರ್ತನೆಗೊಳಿಸಿದೆ. ಕಾಲನ ಹೊಡೆತಕ್ಕೆ ಸಿಕ್ಕಿ ಹಿಂದಿನ ಸಂಭ್ರಮಗಳು ಈಗಿಲ್ಲವಾದರೂ ತುಂಬ ಜನ ವಿದ್ಯಾರ್ಥಿಗಳು ಸೇರಿದ್ದು, ಬೆಳಗ್ಗಿನಿಂದ ಸಾಯಂಕಾಲದವರೆಗೆ ಯಾವುದೇ ರೀತಿಯ ತೊಂದರೆಯಿಲ್ಲದೆ ಆನಂದದಿಂದ ಆಡಿ ನಲಿದು ಹೋಗುವ ಮೂಲಕ ವಿದ್ಯಾರ್ಥಿ ಸಮೂಹಕ್ಕೆ ನೆಲದ ಮಣ್ಣಿನ ಗುಣ ತಿಳಿಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಇವರು ವಿದ್ಯಾರ್ಥಿಗಳಿಗೆ ಕಾಲೇಜಿನ ಹಂತದಲ್ಲಿ ಇಂತಹ ಚಟುವಟಿಕೆಗಳು ದೊರೆತಾಗ ನೆಲಮೂಲದ ಅರಿವುಂಟಾಗುತ್ತದೆ. ಕೇವಲ ಓದು ಪರೀಕ್ಷೆಯನ್ನು ಪಾಸು ಮಾಡಿಸುತ್ತದೆಯೇ ಹೊರತು, ಬದುಕಿನ ಪಾಠಗಳನ್ನು ಕಲಿಸುವುದಿಲ್ಲ. ನಾವೆಲ್ಲರೂ ಕೆಸರಿನ ಕಸುವನ್ನು ಅರಿತವರು. ಹಾಗಾಗಿ ನಮ್ಮ ನಂತರದ ತಲೆಮಾರಿಗೆ ಇಂಥದ್ದನ್ನು ದಾಟಿಸುವಾಗ ಆಗುವ ಸಂಭ್ರಮವೇ ಬೇರೆ. ನಮ್ಮ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗಾದರೂ ಅದನ್ನು ದಕ್ಕಿಸಿದ್ದೇವೆ ಎನ್ನುವ ಸಂತಸ ನಮ್ಮಲ್ಲಿದೆ. ನೀವು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು. ವೇದಿಕೆಯಲ್ಲಿ, ಸಾಂತ್ರಬೆಟ್ಟು ಗುತ್ತುಮನೆಯ ಗುರಿಕಾರ ಆದಿರಾಜ್ ಅಜ್ರಿ, ಯೋಗೀಶ್ ಪೂಜಾರಿ, ಸದಾನಂದ ದೇವಾಡಿಗ, ರಮೇಶ್ ಆಚಾರ್ಯ, ಸುರೇಖಾ ಶೆಟ್ಟಿ, ಕಾಲೇಜಿನ ಐಕ್ಯೂಎಸಿ ಇದರ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ. ಎಸ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಣಿ ಡಾ ವಿಜಯಕುಮಾರಿ, ಸಹ ಕ್ಷೇಮಪಾಲನಾ ಅಧಿಕಾರಿ ಪ್ರೊ. ನಂದಕಿಶೋರ್ , ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಶಂಕರ್, ದೈಹಿಕ ಶಿಕ್ಷಣ ಶಿಕ್ಷಕರಾದ ನವೀನ್ ಚಂದ್ರ ಡಿ., ಹಿಂದಿ ವಿಭಾಗ ಮುಖ್ಯಸ್ಥರಾದ ಡಾ. ಅಶೋಕ್ ಕ್ಲಿಫರ್ಡ್ ಡಿ. ಸೋಜ, ಎನ್. ಎಸ್. ಎಸ್. ಅಧಿಕಾರಿ ಶಂಕರ್ ಕುಡ್ವ
ಉಪಸ್ಥಿತರಿದ್ದರು. ಅಂತಿಮ ಬಿ. ಕಾಂ. ನ ವಿದ್ಯಾರ್ಥಿನಿ ಕು. ಶೃದ್ಧಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



















































































