
ಬೆಂಗಳೂರು: ರಾಜ್ಯದಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ಅಕ್ರಮವನ್ನು ಸಹಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ಎನ್. ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮದ ದೂರು ಬಂದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಲಾಗುವುದು. ಆರೋಪ ದೃಢಪಟ್ಟರೆ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಪರವಾನಗಿ ರದ್ದುಪಡಿಸಲಾಗುವುದು ಎಂದರು.
ರಾಜ್ಯದಲ್ಲಿ 20,547 ನ್ಯಾಯಬೆಲೆ ಅಂಗಡಿಗಳಿದ್ದು, ಪಾರದರ್ಶಕ ವಿತರಣೆಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿದೆ. ಅಕ್ರಮ ಕಂಡುಬಂದರೆ 1967 ಸಹಾಯವಾಣಿಗೆ ದೂರು ನೀಡಬಹುದು. ಗೋದಾಮುಗಳಿಗೆ ಸಿಸಿಟಿವಿ ಹಾಗೂ ಧಾನ್ಯ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಸೂಚಿಸಲಾಗಿದೆ.
ರಾಜ್ಯದಲ್ಲಿ ಆದ್ಯತಾ ಹಾಗೂ ಆದ್ಯತೇತರ ಸೇರಿ 1.54 ಕೋಟಿ ಪಡಿತರ ಚೀಟಿಗಳಿವೆ. ಕೇಂದ್ರದ ಎನ್ಎಫ್ಎಸ್ಎ ಅಡಿ ಪ್ರತಿ ತಿಂಗಳು 2,17,403 ಮೆಟ್ರಿಕ್ ಟನ್ ಆಹಾರ ಧಾನ್ಯ ಪೂರೈಕೆಯಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ 96.16 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 9.90 ಲಕ್ಷ ಮೆಟ್ರಿಕ್ ಟನ್ ರಾಗಿ ಹಾಗೂ 4.54 ಲಕ್ಷ ಮೆಟ್ರಿಕ್ ಟನ್ ಬಿಳಿಜೋಳ ವಿತರಿಸಲಾಗಿದೆ. ಪಡಿತರ ಚೀಟಿಗಳು ಮತ್ತು ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆಗೆ ₹22,756 ಕೋಟಿ ಖರ್ಚಾಗಿದೆ.
ಇದೇ ವೇಳೆ, ಕೇಂದ್ರ ಸರ್ಕಾರ ಗುರುತಿಸಿರುವ 7.76 ಲಕ್ಷ ಶಂಕಾಸ್ಪದ ಕಾರ್ಡ್ಗಳ ಪೈಕಿ ಸುಮಾರು 4.94 ಲಕ್ಷ ಕಾರ್ಡ್ಗಳನ್ನು ಪರಿಷ್ಕರಿಸಲಾಗುತ್ತಿದೆ. 2023ರ ಜೂನ್ನಿಂದ 2026ರ ಜುಲೈವರೆಗೆ 3,70,803 ಆದ್ಯತಾ ಹಾಗೂ 6,358 ಆದ್ಯತೇತರ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.



















































































