ಭಾಗ – 617
ಭರತೇಶ ಶೆಟ್ಟಿ,ಎಕ್ಕಾರು

ಶ್ರೀಕೃಷ್ಣನೂ ಬಕದಾಲ್ಭ್ಯರನ್ನು ನೋಡುತ್ತಿದ್ದಾನೆ. ಪರಸ್ಪರ ದೃಷ್ಟಿ ಮಿಳಿತವಾಗಿದೆ. ತನ್ಮಯರಾಗಿ ಶ್ರೀಕೃಷ್ಣನನ್ನು ನೋಡುತ್ತಿದ್ದ ಬಕದಾಲ್ಭ್ಯರು “ಹೇ ವಾಸುದೇವಾ! ನೀನು ಇದೇ ಭೂಮಿಯಲ್ಲಿ ಅವತರಿಸಿ ಸಮಯವೆಷ್ಟಾಗಿ ಹೋಯಿತು. ನೀನು ನನಗೆ ಕಾಣಿಸಿದ್ದು, ನಾನು ನಿನ್ನನ್ನು ನೋಡುತ್ತಿರುವುದು ಯಾವ ಕಾಲದಿಂದ? ಆ ಒಂದು ದರ್ಶನವನ್ನು ಕಾಣುವ, ನಿನ್ನ ಬಳಿ ಸಾಗುವ ಏಕೈಕ ಆಸೆಯಿಂದ ಕಲ್ಪಾಂತ್ಯದ ಪ್ರಳಯ ಕಾಲದವರೆಗೂ ಯೋಗಶಕ್ತಿಯಿಂದ ಕಾಯುತ್ತಾ ಕಾತರನಾಗಿರುತ್ತಿದ್ದ ನನಗೆ ನಿನ್ನನ್ನು ನೋಡುವ ಭಾಗ್ಯ ಇಷ್ಟು ತಡವಾಗಿ ಹೋಯಿತಲ್ಲಾ! ಎಲ್ಲೆಲ್ಲಿ ಯಾವ ಯಾವ ವಿಧಾನದಿಂದ ನೀನು ಕಾಣಿಸಿಕೊಂಡು ನನ್ನನ್ನು ಸೆಳೆದಿದ್ದೆ. ಆ ಬಳಿಕ ಪರಮಾತ್ಮನಾದ ನಿನ್ನನ್ನು ಸೇರಬೇಕು ಎಂಬ ಏಕ ಉದ್ದೇಶ ಮಾತ್ರ ಹೊಂದಿದ್ದೆ. ನಾನು ಮತ್ತು ನೀನು ಎಂಬ ಎರಡು ವಿಚಾರ ಬಿಟ್ಟು ಈ ಜಗದ ಅನ್ಯಥಾ ಯಾವುದರಲ್ಲೂ ಆಸಕ್ತಿಯನ್ನು ಹೊಂದಿರದ ನನ್ನ ಇಚ್ಚಾಶಕ್ತಿಯಲ್ಲೇನಾದರೂ ಲೋಪವಿತ್ತೆ? ನಿನ್ನನ್ನು ನೋಡಲು ಹಾತೊರೆಯುತ್ತಿದ್ದ ನನಗೆ ಕಲ್ಪಾಂತ್ಯದಲ್ಲಿ ಮಗುವಾಗಿ ಕಾಣಿಸಿಕೊಂಡು ಕಾಣದಾಗುತ್ತಿದ್ದೆ. ಅಂತಿಮವಾಗಿ ಪರಮಾತ್ಮನ ಲೋಕವೆಂದು ಕಲ್ಪಿಸಿರುವ ನಿನ್ನ ಆ ಲೋಕದಲ್ಲೂ ಕೇವಲ ಬೆಳಕಿನ ಕಿರಣದಂತೆ ಒಮ್ಮೆ ಕಾಣಿಸಿ ಕಾಣದಾಗಿದ್ದೆ. ನೀನು ಪದೇ ಪದೇ ನನಗೆ ಮಗುವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿಂದೆ ಏನಾದರೂ ಸಂದೇಶ ಇರಬಹುದು ಎಂದು ಸುದೀರ್ಘವಾಗಿ ಯೋಚಿಸುತ್ತಿದ್ದೆ. ನಿನ್ನನ್ನು ಕಾಣುವ ಪ್ರಯತ್ನದಲ್ಲಿ ನಾನು ಇನ್ನೂ ಮಗುವಷ್ಟೆ ಆಗಿದ್ದೇನೆ ಎಂಬ ಸಂದೇಶ ನಿನ್ನಿಂದ ರವಾನೆಯಾಗುತ್ತಿದೆ ಎಂದು ಅರ್ಥೈಸಿ ನನ್ನ ಪೂರ್ಣ ಇಚ್ಚಾಶಕ್ತಿಯನ್ನು ನಿನಗಷ್ಟೆ ಮೀಸಲಿರಿಸಿ ಅನ್ಯವಾದುದು ಯಾವುದನ್ನೂ ಯೋಚಿಸದೆ, ಎಲ್ಲಾ ಕರ್ಮಗಳನ್ನೂ ತೊರೆದು ದೇಹ ದಂಡನೆಯನ್ನು ಮಾಡುತ್ತಾ ಒಂದೇ ಒಂದು ಆಸೆಯನ್ನು ಮಾತ್ರ ಉಳಿಸಿಕೊಂಡಿದ್ದೆ. ಅದೇನೆಂದರೆ ನಿನ್ನನ್ನು ಸೇರುವುದು. ಹೀಗಿದ್ದೂ ಯಾಕಿಷ್ಟು ವಿಳಂಬವಾಯಿತು ದೇವಾ? ನನಗೆ ಬೇರೆ ಮನೆಯ ಆಸೆಯಿಲ್ಲ. ನೀನಿರುವ ಮನೆ ಸೇರುವ ಆಸೆ ಮಾತ್ರ ಇದ್ದ ಕಾರಣದಿಂದ ಬೇರೆ ಯಾವುದೂ ಬೇಡ ಎಂಬ ಸ್ಮರಣೆಗಾಗಿ ಒಣ ತರಗೆಲೆಯನ್ನು ಧರಿಸಿ ಕುಳಿತಿದ್ದೆ. ನೀನಿರುವ ಮನೆಯನ್ನು ಕಾಣುವ ಯೋಗ ಮತ್ತು ಅವಕಾಶವನ್ನು ನೀನು ಕರುಣಿಸಿದ್ದೆ. ಲೋಕಾಲೋಕಗಳ ಸತ್ಯ ಅರಿಯುವ, ಕಾಣುವ ಭಾಗ್ಯವನ್ನು ಒದಗಿಸಿದೆ. ನನ್ನಲ್ಲಿ ನೀನು ಬೇಕು ಎಂಬ ಒಂದೇ ಒಂದು ಆಸೆ ಹೊರತು ಬೇರೇನಕ್ಕೂ ಮಾನ್ಯತೆ ಇಲ್ಲದೆ ಧೃಡತೆಯಿಂದ ಇದ್ದರೂ ನನಗೆ ನಿನ್ನನ್ನು ಕಾಣಲು ಇಷ್ಟು ಕಾಲ ಬೇಕಾಗಿ ಹೋಯಿತಲ್ಲಾ ಪರಮಾತ್ಮಾ! ಅರ್ಥವಾಗುತ್ತಿದೆ ನನಗೆ, ನಾನು ಕೇಳಿದ್ದು, ಇಚ್ಚಿಸಿದ್ದು ದುರ್ಲಭ ಮತ್ತು ಅಸಾಮಾನ್ಯವಾದುದನ್ನು. ಸುಲಭವಾದುದೇನಾದರೂ ಬಯಸಿದ್ದರೆ ಈಗಾಗಲೆ ನನಗೆ ನಿನ್ನಿಂದ ಪ್ರಾಪ್ತವಾಗಿರುತ್ತಿತ್ತು. ನಾನು ಕೇಳುತ್ತಿದ್ದುದು, ಬಯಸಿದ್ದು, ಇಚ್ಚಾಶಕ್ತಿಯಿಂದ ಬಯಸಿದ್ದು ನಿನ್ನಲ್ಲಿ ನಾನು ಸ್ಥಿತನಾಗಬೇಕೆಂದು. ಅತಿಯಾದುದನ್ನು ಬಯಸಿದೆ, ಅದು ಅತಿ ಕಷ್ಟಕರವಾಗಿದ್ದರೂ ಅದನ್ನು ಸಾಧಿಸುವಲ್ಲಿ ತನಕ ನಾನಾಗಿ ಉಳಿದುದಲ್ಲ. ನೀನು ಉಳಿಸಿರುವುದು ಎಂದೂ ನನಗೆ ಅರ್ಥವಾಗುತ್ತಿದೆ. ಭಗವಂತ ನನ್ನ ಮನದಲ್ಲಿ ಯಾವ ಭಾವ ಪಲ್ಲಟಗಳಾಗಲಿ, ಗೊಂದಲವಾಗಲಿ ಆದದ್ದಿಲ್ಲ. ಒಂದಲ್ಲ ಒಂದು ದಿನ ನನ್ನ ಗುರಿ ಸಾಧನೆ ಮಾಡುತ್ತೇನೆ ಎಂಬ ಧೃಡ ವಿಶ್ವಾಸವಿತ್ತು. ಇಂದು ಮಾತ್ರ ನಾನು ನನ್ನ ಗುರಿ ಸೇರುವ ಸಮಯ ಸನಿಹ ಬಂದಿದೆ ಎಂಬ ಭಾವನೆ ಬಲಗೊಳ್ಳುತ್ತಿದೆ. ಹೇ ಪರಮಾತ್ಮಾ! ನನಗೇನೂ ಬೇಡ. ನೀನು ಬೇಕು, ನಾನು ವಾಸಿಸಲು ಬಯಸಿರುವ ಮನೆ ನೀನು. ನನ್ನಾಸೆಯ ಮನೆ ಸೇರಿದರೆ ನನಗೆ ಶಾಶ್ವತವಾದ ನೆಮ್ಮದಿ ಸಿಗಲಿದೆ. ನನ್ನ ಆಸೆಯನ್ನು ಅನುಗ್ರಹಿಸು ವಾಸುದೇವಾ. ನೀನು ಏನು? ಎಷ್ಟು ? ಎಂದು ಪೂರ್ಣವಾಗಿ ಅರಿತವರು ಯಾರೂ ಇಲ್ಲ. ಯಾರೇ ಆಗಿರಲಿ ಅವರವರ ಅರಿವಿನ ಶಕ್ತಿ ಎಂಬ ಪಾತ್ರೆಯ ಧಾರಣಾ ಶಕ್ತಿ ಎಷ್ಟಿದೆಯೊ ಅಷ್ಟನ್ನು ಮಾತ್ರ ತುಂಬಿಕೊಳ್ಳಬಲ್ಲರು. ಅಂತೆಯೆ ನಾನೂ ಕೂಡ ನನ್ನಿಂದ ನಿನ್ನ ಬಗ್ಗೆ ಎಷ್ಟು ತಿಳಿಯಲು ಸಾಧ್ಯವಾಗಿದೆಯೊ ಅಷ್ಟು ನಿನ್ನನ್ನು ಅರಿಯುವ ಪ್ರಯತ್ನ ಮಾಡುತ್ತಾ ತಿಳಿದುಕೊಂಡಿದ್ದೇನೆ. ಹಾಗೆಂದು ಅದು ಪೂರ್ಣವಲ್ಲ. ಇನ್ನೂ ಬಹಳಷ್ಟು ನಿನ್ನ ಬಗ್ಗೆ ತಿಳಿಯಲಿರುವುದು ಬಾಕಿ ಇದೆ ಎಂಬ ಸತ್ಯವೂ ನನಗೆ ತಿಳಿದಿದೆ. ಭಗವಂತಾ ನೀನು ಭಕ್ತವತ್ಸಲ, ಭಕ್ತರ ಅಧೀನ ಎಂದು ಕರೆಸಿಕೊಂಡಿರುವವನು. ನಿನ್ನ ಈ ಭಕ್ತನ ಆಸೆಯನ್ನು ಅನುಗ್ರಹಿಸು ದೇವಾ” ಎಂದು ಬೇಡಿಕೊಳ್ಳುತ್ತಾ ಸಾಷ್ಟಾಂಗವಾಗಿ ನಮಸ್ಕರಿಸಿದನು.
ಆಗ ಶ್ರೀಕೃಷ್ಣ ಪರಮಾತ್ಮ ಉದ್ದಂಡವಾಗಿ ನಮಸ್ಕರಿಸಿದ್ದ ಬಕದಾಲ್ಭ್ಯರನ್ನು ಹಿಡಿದೆತ್ತಿ ನಿಲ್ಲಿಸಿ “…
ಮುಂದುವರಿಯುವುದು…


















































































